ವಿಧಾನಸಭೆ: ಮುಂದಿನ ನಾಲ್ಕು ತಿಂಗಳೊಳಗೆ ಬೆಂಗಳೂರು ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಪ್ರತಿದಿನ 3500 ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತಿದೆ. ಆದರೆ 200 ಮೆ.ಟ ಮಾತ್ರ ಸಂಸ್ಕರಣೆಯಾಗುತ್ತಿದ್ದು, ಉಳಿದ ಕಸಗಳನ್ನು ಖಾಲಿ ಭೂಮಿಗೆ ಸುರಿಯಲಾಗುತ್ತಿದೆ. ಭೂಮಿಗೆ ಕಸ ಸುರಿಯುವುದನ್ನು ನಿರಂತರವಾಗಿ ಮಾಡಲು ಸಾಧ್ಯವಿಲ್ಲ. ಕಸ ಸಂಸ್ಕರಣೆ ರಾಜ್ಯ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಇನ್ನು 4 ತಿಂಗಳಲ್ಲಿ ಇದರ ಬಗ್ಗೆ ರಚನಾತ್ಮಕ ಕೆಲಸ ನಡೆಯಲಿದೆ ಎಂದು ಶೂನ್ಯವೇಳೆಯಲ್ಲಿ ಬಿಜೆಪಿಯ ಆರ್.ಅಶೋಕ್ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು. ನಗರದಲ್ಲಿ 7 ಕಡೆ ನೂತನವಾಗಿ ಸಂಸ್ಕರಣಾ ಘಟಕ ಆರಂಭಿಸಲು ಚಿಂತನೆ ನಡೆದಿದೆ. ನಾಲ್ಕು ಪ್ರದೇಶಗಳಲ್ಲಿ ಸಂಸ್ಕರಣ ಘಟಕ ಆರಂಭಿಸಲು ಅಂತಿಮ ನಿರ್ಧಾರವೂ ಆಗಿತ್ತು. ಆದರೆ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಸಂಸ್ಕರಣಾ ಘಟಕದಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರೂ ಒಪ್ಪುತ್ತಿಲ್ಲ. ಈ ಸಂಬಂಧ ವೈಜ್ಞಾನಿಕ ಮಾಹಿತಿ ನೀಡಲು ಚೀನಾ ಪ್ರವಾಸ ಏರ್ಪಡಿಸಲು ಸರ್ಕಾರ ಸಿದ್ಧವಿದೆ. ಜನಪ್ರತಿನಿಧಿಗಳು ಸರ್ಕಾರಕ್ಕೆ ಈ ನಿಟ್ಟಿನಲ್ಲಿ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಹಿಂದಿನ ಸರ್ಕಾರ ಕಸ ಸಮಸ್ಯೆ ಬಗ್ಗೆ ಸ್ಪಷ್ಟ ನಿಲುವು ತಾಳದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಕಸವನ್ನು ಭೂಮಿಗೆ ಸುರಿಯುವುದನ್ನೇ ತ್ಯಾಜ್ಯ ವಿಲೇವಾರಿ ಎಂದು ಬಿಜೆಪಿ ಸರ್ಕಾರ ತಿಳಿದಿತ್ತು. ಇದರಿಂದ ಉದ್ಯಾನ ನಗರಿಯು ಕಸ ನಗರಿಯಾಗಿ ಪರಿವರ್ತನೆಗೊಂಡಿತು ಎಂದು ಬಿಜೆಪಿ ಶಾಸಕರನ್ನು ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶೋಕ, ನಾವು5 ವರ್ಷ ಆಡಳಿತ ನಡೆಸಿದ್ದೇವೆಯಷ್ಟೆ. ನಿಮ್ಮ 30 ವರ್ಷದ ಆಡಳಿತದ ಹೊಲಸನ್ನು ತೆಗೆದುಹಾಕಲು 5
ವರ್ಷ ಸಾಲುವುದಿಲ್ಲ. ಕಸದ ಸಮಸ್ಯೆ ನಿಮ್ಮ ಪಕ್ಷ ಹಾಗೂ ಸರ್ಕಾರದ ಕೊಡುಗೆ ಎಂದು ಆರೋಪಿಸಿದರು.