ವಿಧಾನಪರಿಷತ್ತು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅನಧಿಕೃತ ಜಾಹಿರಾತುಗಳ ಬಗ್ಗೆ ಅಗತ್ಯ ಕ್ರಮಕೈಗೊಳ್ಳದೇ ಇರುವುದರಿಂದ ಪಾಲಿಕೆಗೆ ಸುಮಾರು ರು.2,000 ಕೋಟಿ ನಷ್ಟ ಉಂಟಾಗಿದೆ.
ಈ ಕುರಿತು ಸಹಾಯಕ ಆಯುಕ್ತ (ಜಾಹಿರಾತು) ನೀಡಿರುವ ವರದಿಯನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸದಸ್ಯರಾದ ಜಯಮಾಲ ರಾಮಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅನಧಿಕೃತ ಜಾಹಿರಾತುಗಳ ಬಗ್ಗೆ ಪಾಲಿಕೆಯಲ್ಲಿನ ಅಧಿಕಾರಿಗಳು ಸರಿಯಾಗಿ ಜವಾಬ್ದಾರಿವಹಿಸಿಲ್ಲ. ಇದರಿಂದಾಗಿ ನಗರದಲ್ಲಿ 2,297 ಅಧಿಕೃತ ಜಾಹಿರಾತು ಫಲಕಗಳಿದ್ದು, 1,142 ಅನಧಿಕೃತ ಜಾಹಿರಾತು ಫಲಕಗಳಿವೆ. ಆದರೆ, ಅಧಿಕಾರಿ ನೀಡಿರುವ ವರದಿಯಂತೆ 23 ಸಾವಿರ ಅನಧಿಕೃತ ಜಾಹಿರಾತು ಫಲಕಗಳಿವೆ. ಈ ಹಿಂದೆ ಜಾಹಿರಾತು ವಿಭಾಗದಲ್ಲಿ ಕಾನೂನು ಸರಿಯಾಗಿ ಪಾಲನೆಯಾಗದೇ ಇರುವುದರಿಂದ ರಾಜ್ಯದ ಬೊಕ್ಕಸಕ್ಕೆ ರು.2,000 ಕೋಟಿ ನಷ್ಟ ಉಂಟಾಗುವುದಕ್ಕೆ ಕಾರಣ ಎಂದು ವರದಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.
ಕೆಲವರು ಅನುಮತಿ ಪಡೆದು ಜಾಹಿರಾತು ಫಲಕ ಹಾಕಿ ನಂತರದ ವರ್ಷಗಳಲ್ಲಿ ಅನುಮತಿ ನವೀಕರಣ ಮಾಡಿಕೊಳ್ಳದೇ ವಂಚಿಸುತ್ತಿದ್ದಾರೆ. ಅನಧಿಕೃತ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸಹಾಯಕ ಆಯುಕ್ತರು ಬಿಬಿಎಂಪಿ ಆಯುಕ್ತರಿಗೆ ವರದಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹಿರಾತುಗಳನ್ನು ತೆರವುಗೊಳಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ರೀತಿಯ ಜಾಹಿರಾತುಗಳನ್ನು ಅಳವಡಿಸುವವರ ವಿರುದ್ಧ ಕರ್ನಾಟಕ ಓಪನ್ ಪ್ಲೇಸಸ್ ಡಿಸ್ಫಿಗರ್ಮೆಂಟ್ ಕಾಯ್ದೆ-1981ರಡಿಯಲ್ಲಿ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲದೆ ಇಂತಹ ಜಾಹಿರಾತುಗಳನ್ನು ತೆಗೆಯಲು ವಿಳಂಬ ನೀತಿ ಅನುಸರಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.