ರಾಜಕೀಯ

ಸ್ಪೀಕರ್ ಮಾಡುವ ಪ್ರಸ್ತಾಪ ಇಲ್ಲ, ಸಚಿವನಾಗಿಯೇ ಮುಂದುವರೆಯುವೆ: ಜಯಚಂದ್ರ

Lingaraj Badiger

ನವದೆಹಲಿ: ನಾನು ಸ್ಪೀಕರ್ ಆಗುತ್ತೇನೆ ಎಂಬುದು ನಿರಾಧಾರ ಎಂದಿರುವ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರು, ತಾವು ಸಚಿವರಾಗಿಯೇ ಮುಂದುವರೆಯುವುದಾಗಿ ಬುಧವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.

ದೆಹಲಿಯಲ್ಲಿ ಖಾಸಗಿ ಸುದ್ದಿವಾಹನಿಯೊಂದಕ್ಕೆ ಮಾತನಾಡಿರುವ ಜಯಚಂದ್ರ, ನಾನು ಸ್ಪೀಕರ್ ಆಗುತ್ತೇನೆ ಎಂಬ ವರದಿಗೆ ಯಾವುದೇ ಆಧಾರವಿಲ್ಲ ಮತ್ತು ನನ್ನನ್ನು ಸ್ಪೀಕರ್ ಮಾಡುವ ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನನ್ನು ಸ್ಪೀಕರ್ ಮಾಡುವ ಬಗ್ಗೆ ಯಾವುದೇ ಚರ್ಚೆ ಕೂಡ ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸಚಿವರಾದರೆ, ನಾನು ಸ್ಪೀಕರ್ ಆಗುತ್ತೇನೆ ಎಂಬುದು ಸುಳ್ಳು. ತುಮಕೂರು ಜಿಲ್ಲೆ ಕೂಡ ರಾಜ್ಯದ ಒಂದು ದೊಡ್ಡ ಜಿಲ್ಲೆಯಾಗಿದ್ದು, ಹಿಂದೆ ನಾನು ಮತ್ತು ಪರಮೇಶ್ವರ ಇಬ್ಬರೂ ಏಕಕಾಲದಲ್ಲಿ ಸಚಿವರಾಗಿದ್ದೇವು. ತುಮಕೂರು ಜಿಲ್ಲೆಗೆ ಎರಡಲ್ಲ ಮೂರು ಸಚಿವ ಸ್ಥಾನ ಬೇಕು ಎಂದರು.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್ ಕಾಗೋಡು ತಿಮ್ಮಪ್ಪ, ಎ.ಮಂಜು, ವಿನಯ್ ಕುಲಕರ್ಣಿ ಹಾಗೂ ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದು, ಒಂದು ವೇಳೆ ಪರಮೇಶ್ವರ ಸಚಿವರಾದರೆ, ಅದೇ ಜಿಲ್ಲೆಯವರಾದ ಜಯಚಂದ್ರ ಅವರಿಗೆ ಸ್ಪೀಕರ್ ಸ್ಥಾನ ನೀಡುವ ಚಿಂತನೆ ನಡೆದಿದೆ ಎಂದು ನಿನ್ನೆ ಮಾಧ್ಯಮಗಳು ವರದಿ ಮಾಡಿದ್ದವು.

SCROLL FOR NEXT