ರಾಜಕೀಯ

ಬಿಎಸ್ ವೈ ವಿರುದ್ಧ 'ಕುರುಬ' ಕಾರ್ಡ್ ಪ್ಲೇ ಮಾಡುತ್ತಿರುವ ಕೆ.ಎಸ್. ಈಶ್ವರಪ್ಪ

Shilpa D

ಬೆಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಅವರು ನೇಮಕಗೊಂಡ ನಂತರ ಬಿಜೆಪಿ ಒಡೆದು ಹೋಳಾಗುವ ಸ್ಥಿತಿಗೆ ಬಂದು ನಿಂತಿದೆ. ಈ ಮಧ್ಯೆ  ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ ನಡುವಿನ  ಒಳಜಗಳ ಬೀದಿಗೆ ಬಿದ್ದಿದ್ದು, ಈಶ್ವರಪ್ಪ ಯಡಿಯೂರಪ್ಪ ವಿರುದ್ದ ಕುರುಬ ಕಾರ್ಡ್ ಪ್ಲೇ ಮಾಡಲು ಮುಂದಾಗಿದ್ದಾರೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಆರಂಭಿಸಿ ಜಾತಿ ಬಲ ತೋರಿಸಲು ಈಶ್ವರಪ್ಪ ನಿರ್ಧರಿಸಿದ್ದಾರೆ. ಕೇವಲ ಕುರುಬ ಸಮುದಾಯವಷ್ಟೇ ಅಲ್ಲದೇ ಹಿಂದುಳಿದ ಎಲ್ಲಾ ಸಮುದಾಯಗಳ ನಾಯಕನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿರುವ ರಾಜ್ಯದ್ಯಾಂತ ರ್ಯಾಲಿಗಳನ್ನು ನಡೆಸಲು ನಿರ್ಧರಿಸಿದ್ದಾರೆ.

ಬಿಜೆಪಿಯಲ್ಲಿದ್ದುಕೊಂಡೇ ಅಹಿಂದ ಸಂಘಟನೆ ಮಾಡಲು ಮುಂದಗಾಗಿರುವ ಈಶ್ವರಪ್ಪ ಪರೋಕ್ಷವಾಗಿ ಯಡಿಯೂರಪ್ಪ ವಿರುದ್ದ ತೊಡೆತಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲಾಧ್ಯಕ್ಷರನ್ನಾಗಿ ಎಸ್. ರುದ್ರೇಗೌಡ ಅವರನ್ನು ನೇಮಿಸಿರುವುದಕ್ಕೆ ಈಶ್ವರಪ್ಪ ಕೆಂಡಾಮಂಡಲವಾಗಿದ್ದಾರೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ವಿರುದ್ಧ ರುದ್ರೇಗೌಡ ಕೆಜೆಪಿಯಿಂದ ಸ್ಪರ್ಧಿಸಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪಕ್ಷದ ಪದಾಧಿಕಾರಿಗಳ ನೇಮಕ ವಿಷಯದಲ್ಲಿ ತಾಳುತ್ತಿರುವ ಏಕಪಕ್ಷೀಯ ನಿಲುವು, ಪಕ್ಷದ ಮುಖಂಡರಲ್ಲಿ ಅಸಮಾಧಾನ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಕೆ.ಎಸ್ ಈಶ್ವರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಿದ್ದು, ಈ ಸಂಬಂಧ ಆಗಸ್ಟ್ 16 ರಂದು ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ.

ಈ ನಡುವೆ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಹೇಳಿರುವ ಎಸ್.ಈಶ್ವರಪ್ಪ, ನಮ್ಮಲ್ಲಿನ ಭಿನ್ನಾಭಿಪ್ರಾಯಗಳಿಂದ ಕಾಂಗ್ರೆಸ್‌ಗೆ ಲಾಭವಾಗುವುದು ಬೇಡ ಎಂದು ತಿಳಿಸಿದ್ದಾರೆ. ಯಡಿಯೂರಪ್ಪ ಮತ್ತು ನಮ್ಮ ಮಧ್ಯೆ ಭಿನ್ನಾಭಿಪ್ರಾಯಗಳಿಲ್ಲ. ಕೆಲವು ವಿಷಯಗಳಲ್ಲಿ ಅಸಮಾಧಾನವಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ.

SCROLL FOR NEXT