ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರು.60 ಲಕ್ಷ ಬೆಲೆ ಬಾಳುವ ವಾಚನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಯೋಧರ ಕುಟುಂಬಕ್ಕೆ ದಾನ ಮಾಡಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಸಲಹೆ ನೀಡಿದ್ದಾರೆ.
ನಿಮಗೆ ಕೈ ಗಡಿಯಾರವನ್ನು ಏಕೆ ಉಡುಗೊರೆಯಾಗಿ ಕೊಟ್ಟರೋ ಎಂಬುದು ನನಗೆ ತಿಳಿದಿಲ್ಲ. ಆದರೆ, ರು.60 ಲಕ್ಷ ಮೌಲ್ಯದ ಕೈಗಡಿಯಾರವನ್ನು ಉಡುಗೊರೆಯಾಗಿ ಪಡೆಯುವ ಮೂಲಕ ಸಿದ್ದರಾಮಯ್ಯ ಪ್ರಾಮಾಣಿಕತೆಗೆ ಧಕ್ಕೆ ಆದಂತಾಗಿದೆ. ಅಷ್ಟೇ ಅಲ್ಲದೇ, ಪಕ್ಷಕ್ಕೂ ಮುಜುಗರವನ್ನುಂಟು ಮಾಡಿದೆ. ಹಾಗಾಗಿ, ನಿಮ್ಮ ಕೈಗಡಿಯಾರವನ್ನು ಹರಾಜು ಹಾಕಿ, ಅದರಲ್ಲಿ ಬಂದ ಹಣವನ್ನು ಮೃತ ಯೋಧರ ಕುಟುಂಬಕ್ಕೆ ನೀಡಿ ಸಹಾಯ ಮಾಡಿ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಕೆಲಸಗಳನ್ನು ನೋಡಿಕೊಳ್ಳುವುದೇ ಮುಖ್ಯಮಂತ್ರಿಗಳ ಕೆಲಸ. ಆದರೆ, ಇಂತಹ ದುಬಾರಿ ವಾಚ್ ಕಟ್ಟಿಕೊಂಡು ಪಕ್ಷಕ್ಕೆ ಮುಜುಗರ ತರವುದು ಸರಿಯಲ್ಲ. ಪ್ರಾಮಾಣಿಕ ರಾಜಕೀಯ ವ್ಯಕ್ತಿ ಎಂದು ಸಿದ್ದರಾಮಯ್ಯ ಕರೆಸಿಕೊಂಡಿದ್ದಾರೆ. ವಾಚ್ ವಿವಾದದ ಸಲುವಾಗಿ ಹೆಸರು ಹಾಳಾಗಿ ಹೋಗುವುದು ಸರಿಯಲ್ಲ ಎಂದು ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.