ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆ ಅನುಭವಿಸಿದ ಬಿಜೆಪಿಯು ಸೋಮವಾರ ಅತ್ಮಾವಲೋಕನ ನಡೆಸಿತು.
ಪಕ್ಷದ ಕಚೇರಿಯಲ್ಲಿ ಹಿರಿಯ ಮುಖಂಡರು, ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕದ ಪ್ರಮುಖರ ಸಭೆ ನಡೆಯುತು. ಪ್ರಮುಖವಾಗಿ ಪಕ್ಷದ ಪ್ರಮುಖ ನಾಯಕರು ರಾಜ್ಯ ಪ್ರವಾಸಕ್ಕೆ ತೊಡಗಿಕೊಂಡು ಚುನಾವಣೆ ಸಂದರ್ಭದಲ್ಲಿ ತಮ್ಮ ಸ್ವಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಗಮನಹರಿಸದೇ ಇದ್ದಿದ್ದು, ತಂತ್ರಗಾರಿಕೆಯಲ್ಲಿ ಎಡವಿದ್ದು ಚರ್ಚೆಗೆ ಬಂದಿತು.
ಪ್ರತಿ ಕ್ಷೇತ್ರದಲ್ಲಿ ಆ ಭಾಗದ ನಾಯಕರು ನೇತೃತ್ವ ತೆಗೆದುಕೊಂಡಿದ್ದರೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬಹುದಿತ್ತು. ಜೊತೆಗೆ ಕೊನೆ ಹಂತದಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿದ್ದು ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಪಕ್ಷದ ಪ್ರಮುಖರು ಅಭಿಪ್ರಾಯಪಟ್ಟರು.
ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಪರಿಷತ್ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆಲ್ಲಲು ಉದ್ದೇಶಿಸಲಾಗಿತ್ತು. ಆದರೆ
ಸಂಪನ್ಮೂಲದ ಕೊರತೆಯಿಂದ ನಿರೀಕ್ಷಿತ ಗೆಲುವು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪಕ್ಷ ಕಡೆ ಕ್ಷಣದಲ್ಲಿ ಹೆಚ್ಚು ಹಣದ ಹೊಳೆ ಹರಿಸಿದ ಕಾರಣ ಪಕ್ಷಕ್ಕೆ ಇನ್ನಷ್ಟು ಹೊಡೆತ ಬಿದ್ದಿತು. ಅಲ್ಲದೆ ಪಕ್ಷದ ಹಿರಿಯ ನಾಯಕರು ಪ್ರವಾಸ ಮಾಡುವ ಬದಲಿಗೆ ತಮ್ಮ ಕ್ಷೇತ್ರಗಳಲ್ಲಿಯೇ ಪ್ರಚಾರ ಮಾಡುವ ಅಗತ್ಯವಿತ್ತು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು ಎಂದು ಮಾಹಿತಿ ನೀಡಿದರು. ಕಾಂಗ್ರೆಸ್ ವಾಮ ಮಾರ್ಗದಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ್ದರಿಂದಾಗಿ ಕೊನೆ ಕ್ಷಣದಲ್ಲಿ ಬೆಂಗಳೂರು, ಚಿತ್ರದುರ್ಗ, ರಾಯಚೂರು, ಬಳ್ಳಾರಿ ಕ್ಷೇತ್ರದಲ್ಲಿ ತಮ್ಮ ಕೈ ತಪ್ಪಿತು ಎಂದು ಅಭಿಪ್ರಾಯಪಟ್ಟರು.
ಪಕ್ಷ ವಿರೋಧಿ ಚಟುವಟಿಕೆ
ಯಾವುದೇ ಜಿಲ್ಲೆಗಳಲ್ಲಿ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆದಿದ್ದರೆ ವರದಿ ನೀಡುವಂತೆ ಸೂಚಿಸಲಾಗಿದೆ. ಈವರೆಗೆ ಯಾವುದೇ ಜಿಲ್ಲೆಯಿಂದ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ವರದಿ ಬಂದಿಲ್ಲ ಎಂದು ಸಿ.ಟಿ.ರವಿ ಹೇಳಿದರು.
ವಿಜಯಪುರದಲ್ಲಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾದ ಯತ್ನಾಳ್ರ ವಿಚಾರ ಚರ್ಚೆಗೆ ಬರಲಿಲ್ಲ. ಆದರೆ ಪಕ್ಷಕ್ಕೆ ಯಾರೂ ಅಸ್ಪೃಷ್ಯರಲ್ಲ. ಯಾರಿಗೂ ಶಾಶ್ವತವಾಗಿ ಬಾಗಿಲು ಮುಚ್ಚಲ್ಲ. ಹಾಗೆಂದು ಬಾಯಿಗೆ ಬಂದಂತೆ ವರ್ತಿಸಿದರೆ ಅದನ್ನು ಪಕ್ಷ ಸಹಿಸುವುದೂ ಇಲ್ಲ ಎಂದರು.
ಗ್ರಾಪಂಗೂ ಚಿಹ್ನೆ ಬೇಕು
ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲೂ ರಾಷ್ಟ್ರೀಯ ಪಕ್ಷ ಚಿಹ್ನೆಯಿ ಸ್ಪರ್ಧಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕೆಂದು ಬಿಜೆಪಿ ಸಭೆ ಅಭಿಪ್ರಾಯಪಟ್ಟಿದೆ. ಈ ಚುನಾವಣೆಯಲ್ಲಿ ನಡೆದ ಬೆಳವಣಿಗೆಯಿಂದ ಇಂತಹದ್ದೊಂದು ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.