ಮೈಸೂರು: 2018 ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಗುಂಡ್ಲು ಪೇಟೆ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದ್ದು, ಭಾನುವಾರ ಮತದಾನ ನಡೆಯಲಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮಾಜಿ ಸಚಿವ ದಿ. ಹೆಚ್ಎಸ್ ಮಹದೇವ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಅನುಕಂಪದ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದರೆ. ಬಿಜೆಪಿಯ ಅಭ್ಯರ್ಥಿ ನಿರಂಜನ್ ಕುಮಾರ್ ಕಳೆದ ಎರಡು 2008-2013 ರ ವಿಧಾನಸಭಾ ಚುನಾವಣೆಗಳಲ್ಲಿ ಮಹದೇವ ಪ್ರಸಾದ್ ಅವರ ವಿರುದ್ಧ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದು, ಬಿಜೆಪಿಯೂ ಸಹ ತನ್ನ ಅಭ್ಯರ್ಥಿ ಪರ ಅನುಕಂಪದ ಆಧಾರದಲ್ಲಿ ಮತ ಬೇಟೆ ನಡೆಸಿದೆ. ನಿರಂಜನ್ ಕುಮಾರ್ ಅವರ ತಂದೆ ಸಿಎಂ ಶಿವಮಲ್ಲಪ್ಪ ಸಹ ಮಹದೇವ ಪ್ರಸಾದ್ ಅವರ ವಿರುದ್ಧ ಎರಡು ಬಾರಿ ಸೋತಿದ್ದರು.
ಗುಂಡ್ಲು ಪೇಟೆಯಲ್ಲಿ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಪ್ರಮುಖ ವಿಷಯವಾಗಿದ್ದರೂ ಸಹ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಪ್ರತಿಷ್ಠೆಯ ವಿಷಯ ಹೆಚ್ಚು ಪ್ರಾಮುಖ್ಯತೆ ಪಡೆದಿದ್ದು, ಸಿಎಂ ಸಿದ್ದರಾಮಯ್ಯ 10 ದಿನಗಳು ಪ್ರಚಾರ ನಡೆಸಿ 5 ಬಾರಿ ಗುಂಡ್ಲು ಪೇಟೆಗೆ ಭೇಟಿ ನೀಡಿದ್ದಾರೆ. ಗುಂಡ್ಲು ಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಅಭಿಪ್ರಾಯ ಇರಲಿಲ್ಲವಾದರೂ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಗೀತಾ ಮಹದೇವ ಪ್ರಸಾದ್ ಅವರನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮನವೊಲಿಕೆ ಮಾಡಿದ್ದರು. ಗೀತಾ ಮಹದೇವ ಪ್ರಸಾದ್ ಅವರ ರಾಜಕೀಯ ಅನಾನುಭವವನ್ನೇ ಪ್ರಧಾನವಾಗಿರಿಸಿಕೊಂಡು ಬಿಜೆಪಿ ಪ್ರಚಾರ ನಡೆಸಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಚಿವ ಎಂಬಿ ಪಾಟೀಲ್, ಡಿಕೆ ಶಿವಕುಮಾರ್ ಸೇರಿದಂತೆ 12 ಕ್ಕೂ ಹೆಚ್ಚು ಜನ ಸಚಿವರನ್ನು ಚುನಾವಣಾ ಪ್ರಚಾರಕ್ಕಾಗಿ ನಿಯೋಜಿಸಿದ್ದರು.
ಕಪಿಲಾ ನದಿ ನೀರನ್ನು ಗುಂಡ್ಲುಪೇಟೆಗೆ ತಂದಿದ್ದು, ಮೂಲಸೌಕರ್ಯ ಅಭಿವೃದ್ಧಿ ಮಾಡಿದ್ದು, ಪ್ರವಾಸೋದ್ಯಮ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಪ್ರಾರಂಭವಾಗುವಂತೆ ಮಾಡಿದ್ದು ಸೇರಿದಂತೆ ಗುಂಡ್ಲು ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಹದೇವ ಪ್ರಸಾದ್ ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ನೆನಪಿಸಿರುವ ಕಾಂಗ್ರೆಸ್ ಪಕ್ಷ ಹಾಗೂ ಗೀತಾ ಮಹದೇವಪ್ರಸಾದ್, ಕ್ಷೇತ್ರದ ಅಭಿವೃದ್ಧಿ ಹೀಗೆಯೇ ಮುಂದುವರೆಯಲು ಜನತೆಯ ಬೆಂಬಲ ಕೋರಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವೂ ಇದ್ದು, ಲಿಂಗಾಯತ ಸಮುದಾಯದ ಪ್ರಾಬಲ್ಯವಿದೆ. 20 ದಿನಗಳ ವರೆಗೆ ಗುಂಡ್ಲು ಪೇಟೆಯಲ್ಲಿ ಪ್ರಚಾರ ನಡೆಸಿದ್ದ ಯಡಿಯೂರಪ್ಪ, ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯ ಗೆಲುವು ಮುಂದಿನ ಚುನಾವಣೆ ವೇಳೆಗೆ ತಮ್ಮನ್ನು ಮುಖ್ಯಮಂತ್ರಿ ಗಾದಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ ಎಂದು ಜನತೆಯ ಬಳಿ ಹೇಳಿದ್ದಾರೆ. ನಿರಂಜನ್ ಕುಮಾರ್ ಗೌಡ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಈ ಸಮುದಾಯದ್ದು ಶೇ.80 ರಷ್ಟು ಮತಗಳಿವೆ. ಗೀತಾ ಮಹದೇವ್ ಪ್ರಸಾದ್ ಶೆಟ್ಟಿ ಲಿಂಗಾಯತ ಸಮುದಾಯದವರಾಗಿದ್ದು, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಸಿಎಂ ಆಗುವುದಕ್ಕೆ ಸಹಕಾರಿಯಾಗಲಿದೆ ಎಂದು ಹಲವು ವೀರಶೈವ ಮುಖಂಡರು ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ.
ಈ ಕ್ಷೇತ್ರದಲ್ಲಿ ದಲಿತರೂ ಸಹ ಪ್ರಾಬಲ್ಯ ಹೊಂದಿದ್ದು, ಚಲವಾದಿ ಮಹಾಸಭಾದ ಅಧ್ಯಕ್ಷ ಕೆ ಶಿವರಾಮ್ ಅವರನ್ನು ಕರೆಸಿ ಬಿಜೆಪಿ ಚುನಾವಣಾ ಪ್ರಚಾರ ನಡೆಸಿದೆ. ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೆ ಶಿವರಾಮ್, ಸಿದ್ದರಾಮಯ್ಯ ದಲಿತ ವಿರೋಧಿಯಾಗಿದ್ದು ದಲಿತರಿಗೆ ಉಪಮುಖ್ಯಮಂತ್ರಿ ಪಟ್ಟ ತಪ್ಪಿಸಿದ್ದಾರೆ ಹಾಗೂ ವಿ ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಗಡಿ ಪ್ರದೇಶವಾದ್ದರಿಂದ ತಮಿಳು ಮಾತನಾಡುವವರ ಸಂಖ್ಯೆಯೂ ಹೆಚ್ಚಿದ್ದು, ಯಡಿಯೂರಪ್ಪ ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಸ್ಥಾಪಿಸಿದ್ದರ ಆಧಾರದಲ್ಲಿ ಮತ ಯಾಚಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos