ಮಂಡ್ಯ: ಜೆಡಿ(ಎಸ್) ಬಂಡಾಯ ನಾಯಕರ ಬೃಹತ್ ಮೆರವಣಿಗೆ
ಮಂಡ್ಯ: ಜೆಡಿ(ಎಸ್) ವಿರುದ್ದ ಬಂಡಾಯವೆದ್ದಿರುವ ಶಾಸಕರು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ನಾಗಮಂಗಲದಲ್ಲಿ ಶುಕ್ರವಾರ ಬೃಹತ್ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಿದರು.
2018 ವಿಧಾನಸಭಾ ಚುನಾವಣಾ ಕಣದಲ್ಲಿ ಸ್ಪರ್ಧಿಸಲು ಶಕ್ತಿಯಿರುವ ನಾಯಕರು ಎಂದೇ ಹೇಳಲಾಗುವ ಹಲವು ಶಾಸಕರು ಎನ್.ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಅಭಿಮಾನಿಗಳು ನಡೆಸಿದ್ದ ಬೃಹತ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದರು.
ಶಾಸಕ ಜಮೀರ್ ಅಹಮದ್, ಹೆಚ್.ಸಿ.ಬಾಲಕೃಷ್ಣ, ರಮೇಶ್ ಬಾಬು, ಇಕ್ಬಾ...ಅನ್ಸಾರಿ, ಅಖಂಡ ಶ್ರೀನಿವಾಸ ಮೂರ್ತಿ, ಭೀಮಾನಾಯಕ್, ಮಾಜಿ ಸಂಸದ ಜಿ.ಮಾದೇಗೌಡ, ಮಾಜಿ ಸ್ಪೀಕರ್ ಕೃಷ್ಣ ಸೇರಿದಂತೆ ಹಲವು ಒಕ್ಕಲಿಗ ಮುಖಂಡರು ಹಾಜರಿದ್ದರು.
ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್'ಗೆ ಸೇರ್ಪಡೆಗೊಂಡ ಎಲ್.ಆರ್.ಶಿವರಾಮೇಗೌಡ, ಸುರೇಶ್ ಗೌಡ ಅವರನ್ನೂ ನಾಗಮಂಗಲ ಕ್ಷೇತ್ರದಲ್ಲಿ ಚೆಲುವರಾಯಸ್ವಾಗೆ ಪರ್ಯಾಯ ಶಕ್ತಿಯಾಗಿ ಬೆಳೆಸಲು ದೇವೇಗೌಡ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ಬಂಡಾಯ ಶಾಸಕರು, ಯುದ್ಧಕ್ಕೆ ಸಿದ್ದರಾಗಿದ್ದೇವೆಂಬ ಸಂದೇಶವನ್ನು ಈ ಬೃಹತ್ ಸಮಾವೇಶದ ಮೂಲಕ ಜೆಡಿಎಸ್ ವರಿಷ್ಠರಿಗೆ ರವಾನಿಸಿದ್ದಾರೆ.
ಸಮಾವೇಶದಲ್ಲಿ ಮಾಜಿ ಸಂಸದ ಡಿ. ಮಾದೇಗೌಡ ಅವರಿಗೆ ಸನ್ಮಾನ ಮಾಡಲಾಯಿತು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಾದೇಗೌಡ ಅವರು, ಜೆಡಿ(ಎಸ್) ಬಂಡಾಯ ಶಾಸಕರು ಕಾಂಗ್ರೆಸ್'ಗೆ ಸೇರ್ಪಡೆಗೊಳ್ಳುವಂತೆ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ನಾಯಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆಂದು ತಿಳಿಸಿದರು.
ನಂತರ ಮಾತನಾಡಿದ ಶಾಸಕ ಜಮೀರ್ ಅಹಮದ್ ಅವರು, ಹೆಚ್.ಡಿ. ಕುಮಾರಸ್ವಾಮಿಯವರ ವಿರುದ್ಧ ಹರಿಹಾಯ್ದರು. ಒಂದು ಕಾಲದಲ್ಲಿ ನಾವು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೆವು. ಇದೀಗ ಬಂಡಾಯ ಶಾಸಕರು ಒಂದುಗೂಡಿದ್ದಾರೆಂಬುದನ್ನು ಚೆಲುವರಾಯಸ್ವಾಮಿಯವರು ಬಹಿರಂಗಪಡಿಸಿದ್ದಾರೆಂದು ಹೇಳಿದ್ದಾರೆ.
ಚನ್ನರಾಯಪಟ್ಟಣ ಮಾಜಿ ಶಾಸಕ ಪುಟ್ಟೇಗೌಡ ಅವರು ಮಾತನಾಡಿ, ಮಂಡ್ಯವನ್ನು ತಮ್ಮ ವೈಯಕ್ತಿಕ ಆಸ್ತಿಯೆಂಬಂತೆ ನಡೆದುಕೊಳ್ಳುತ್ತಿರುವವರಿಗೆ ಸರಿಯಾದ ಪಾಠವನ್ನು ಕಲಿಸಬೇಕೆಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos