ರಾಜಕೀಯ

ಕೆಲದಿನಗಳಿಂದ ನನಗೆ ಗ್ರಹಣ ಹಿಡಿದಿತ್ತು, ಈಗ ಅದರಿಂದ ಮುಕ್ತಿ ದೊರೆತಿದೆ: ಡಿಕೆ ಶಿವಕುಮಾರ್

Shilpa D
ಬೆಂಗಳೂರು: ಕೆಲವು ದಿನಗಳಿಂದ ನನಗೆ ಗ್ರಹಣ ಹಿಡಿದಿತ್ತು, ಈಗ ಅದರಿಂದ ಬಿಡುಗಡೆಯಾಗಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿಯ ನಂತರ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್, ಯಾವ ಯಾವ ಸ್ಥಳಗಳಲ್ಲಿ ಆಪರೇಷನ್ ನಡೆದಿವೆ ಎಂಬುದರ ಬಗ್ಗೆ ನನಗೆ ಗೊತ್ತು. ಆದರೆ ಇಲ್ಲಿ ಅವುಗಳನ್ನು ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ನಾನು ಸಂಕಷ್ಟದಲ್ಲಿದ್ದಾಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ನಾಯಕರು ನನಗೆ ಬೆಂಬಲ ಸೂಚಿಸಿದ್ದಾರೆ. ನನಗೆ ಧೈರ್ಯ ಹೇಳಿದ್ದಾರೆ. ಸಚಿವ ಗಿರಿ ಬರುತ್ತೆ ಹೋಗುತ್ತೆ, ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾನು ಸಚಿವನಾಗಿದ್ದೆ. ಆಗ ಅವಧಿ ಪೂರ್ವ ಚುನಾವಣೆ ಎದುರಾಗಿತ್ತು. ಅನಂತರ ನಾನು ಯಾವುದೇ ಸಚಿವ ಹುದ್ದೆ ಬಯಸಿರಲಿಲ್ಲ ಎಂದು ತಿಳಿಸಿದ್ದಾರೆ. 
ಗುಜರಾತ್ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ 44 ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲಕ್ಕೊಳಪಡಬಹುದು ಎಂಬ ಭೀತಿಯಲ್ಲಿ ಬೆಂಗಳೂರಿಗೆ ಕರೆತಂದು ರೆಸಾರ್ಟ್ ನಲ್ಲಿರಿಸಲಾಗಿತ್ತು. ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವಿಗೆ ಕಾರಣವಾದ ಡಿ.ಕೆ ಶಿವಕುಮಾರ್ ಅವರನ್ನು ಎಲ್ಲರೂ ಅಭಿನಂದಿಸಿದ್ದಾರೆ.
ಮನ್ ಕೀ ಬಾತ್ ನಿಂದ ಹಸಿದವರ ಹೊಟ್ಟೆ ತುಂಬುವುದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ದೇಶಾದ್ಯಂತ ಎಲ್ಲಾ ಪ್ರದೇಶಗಳಲ್ಲೂ ದಲಿತರು ಹಾಗೂ ಮುಸಲ್ಮಾನರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಆರೋಪಿಸಿದರು.
SCROLL FOR NEXT