ರಾಜಕೀಯ

ವಿಧಾನ ಪರಿಷತ್ ಗೆ ಸಿಎಂ ಇಬ್ರಾಹಿಂ ಅವಿರೋಧ ಆಯ್ಕೆ

Shilpa D
ಬೆಂಗಳೂರು: ವಿಧಾನಪರಿಷತ್‌ನ ಒಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ಇಂದು ನಾಮ ಪತ್ರ ಸಲ್ಲಿಸಿದರು.  
ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಧಾನಸಭೆಯ ಉಪಾಧ್ಯಕ್ಷ ಶಿವಶಂಕರರೆಡ್ಡಿ, ರಾಮಲಿಂಗರೆಡ್ಡಿ ಸೇರಿದಂತೆ ಹತ್ತು ಮಂದಿ ಇಬ್ರಾಹಿಂ ಸಲ್ಲಿಸಿರುವ ನಾಮಪತ್ರಕ್ಕೆ ಸೂಚಕರಾಗಿದ್ದಾರೆ.  ಬಿಜೆಪಿಯ ವಿಮಲಾಗೌಡ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಕಾಗ್ರೆಸ್‌ನಿಂದ ಸಿ.ಎಂ. ಇಬ್ರಾಹಿಂ ಅವರು ನಾಮಪತ್ರ ಸಲ್ಲಿಸಿದರು.
ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಸಮಯ ನಿಗದಿಯಾಗಿದ್ದು, ಅಲ್ಲಿಯವರೆಗೆ ಬಿಜೆಪಿ ಅಥವಾ ಜೆಡಿಸ್ ಪಕ್ಷದವರು ನಾಮಪತ್ರ ಸಲ್ಲಿಸಲಿಲ್ಲ. ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಅವಿರೋಧವಾಗಿ ಆಯ್ಕೆ ಖಚಿತವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡುವುದು ಅಥವಾ ಬಿಡುವುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದಾರೆ.  
ಇನ್ನೂ ಸಿ.ಎಂ ಇಬ್ರಾಹಿಂ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬಹುದು ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.
ಇನ್ನೂ ತಮ್ಮ ಬಳಿ 10.48 ಕೋಟಿ ಚರಾಸ್ತಿ, 14,52 ಕೋಟಿ ಸ್ತಿರಾಸ್ತಿ ಇರುವುದಾಗಿ ಸಿಎಂ ಇಬ್ರಾಹಿಂ ಘೋಷಿಸಿಕೊಂಡಿದ್ದಾರೆ.
ತಮ್ಮ ಪತ್ನಿ ಶಾಹಿಲಾ ಅವರ ಬಳಿ 8.04 ಕೋಟಿ ಚರಾಸ್ತಿ ಮತ್ತು 9.19 ಸ್ತಿರಾಸ್ತಿ ಇದ್ದು, 13.28 ಲಕ್ಷ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಇರುವುದಾಗಿ ಘೋಷಿಸಿದ್ದಾರೆ.
SCROLL FOR NEXT