ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಸೆಡ್ಡು ಹೊಡೆದು ತನ್ನ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲು ಜೆಡಿ (ಎಸ್) ಪಕ್ಷ ತಯಾರಾಗಿದೆ. ಇದಕ್ಕಾಗಿ ಪಕ್ಷವು 'ಮಿಷನ್ 170’ ಎನ್ನುವ ಯೋಜನೆಯೊಂದನ್ನು ಹಾಕಿಕೊಂಡಿದೆ. ಇದೇ ವೇಳೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ 'ಪರಿವರ್ತನಾ ಯಾತ್ರೆ' ಮತ್ತು 'ಮಿಷನ್ 150'ಮೂಲಕ ಕನಿಷ್ಠ 150 ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.
ಪಕ್ಷದಲ್ಲಿನ ಮಿತವಾದ ಸಂಪನ್ಮೂಲಗಳ ಆಧಾರದ ಮೇಲೆ ಜೆಡಿ (ಎಸ್) 224 ವಿಧಾನಸಭಾ ಕ್ಷೇತ್ರಗಳಲ್ಲಿ 170 ಸ್ಥಾನಗಳಿಗೆ ಮಾತ್ರ ಮಹತ್ವ ನೀಡಿದ್ದು ಉಳಿದ 54 ಸ್ಥಾನಗಳನ್ನು ಕೈವಶ ಮಾಡಿಕೊಳ್ಳುವುದು ಕಠಿಣ ಎನ್ನುವ ನಿರ್ಧಾರಕ್ಕೆ ಬಂದಿದೆ.
ಪಕ್ಷದ ರಾಜ್ಯಾಧ್ಯಕ್ಷರಾದ ಎಚ್. ಡಿ. ಕುಮಾರಸ್ವಾಮಿ ಒಟ್ಟಾರೆ ಕ್ಷೇತ್ರಗಳನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ವಿಂಗಡಿಸಿದ್ದು . ಅದರಲ್ಲಿ 80 ಕ್ಷೇತ್ರಗಳು 'ಎ' ವಿಭಾಗದಲ್ಲಿ ಬರಲಿದೆ. ಇಲ್ಲೆಲ್ಲಾ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ ಎಂದು ಬಲವಾಗಿ ಹೇಳಬಹುದಾಗಿದೆ. ಇನ್ನುಳಿದ ತೊಂಭತ್ತು ಕ್ಷೇತ್ರಗಳಲ್ಲಿ ಪರಿಶ್ರಮದಿಂದಲೂ, ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಖೇನ ಜಯ ಸಾಧಿಸಬೇಕಿದೆ . ಇನ್ನು 'ಸಿ' ವಿಭಾಗದಲ್ಲಿ ಬರುವ 54 ಸ್ಥಾನಗಳಲ್ಲಿ ಪಕ್ಷವು ಜಯ ಗಳಿಸುವ ಭರವಸೆಯನ್ನು ಹೊಂದಿಲ್ಲ. ಇದರಲ್ಲಿ 'ಎ' ವಿಭಾಗದ ಹೆಚ್ಚಿನ ಕ್ಷೇತ್ರಗಳು ದಕ್ಷಿಣ ಅಥವಾ ಮದ್ಯ ಕರ್ನಾಟಕದಲ್ಲಿ ಬರುತ್ತವೆ.
ಪಕ್ಷದ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿತರ ಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡಿದ ಕುಮಾರಸ್ವಾಮಿ, "ನಾವು ಕ್ಷೇತ್ರಗಳನ್ನು ಎ, ಬಿ ಮತ್ತು ಸಿ ವಿಭಾಗಗಳಾಗಿ ವಿಂಗಡಿಸಿದ್ದೇವೆ. ನಾವು ಗೆಲ್ಲಲೇ ಬೇಕಾದ 70 ರಿಂದ 80 ಕ್ಷೇತ್ರಗಳನ್ನು ಮೊದಲ ಪಟ್ಟಿಯಲ್ಲಿ ಹಾಕಿದ್ದೇವೆ. ಇನ್ನು 20 ರಿಂದ 30 ಸ್ಥಾನಗಳಿಗೆ ತೀವ್ರ ಪೈಪೋಟಿ ಎದುರಿಸಿ ಗೆಲ್ಲಬಹುದು. ಒಟ್ಟಾರೆ ನಾವು ಸ್ವಂತ ಬಲದಲ್ಲಿ ಸರ್ಕಾರ ರಚನೆಗೆ ಅಗತ್ಯವಾದ 113 ಸ್ಥಾನಗಳನ್ನು ಪಡೆಯಲು ಪಣ ತೊಟ್ಟಿದ್ದೇವೆ" ಎಂದರು.
ದೇವೇಗೌಡ ಮತ್ತು ಕುಮಾರಸ್ವಾಮಿ 'ಎ' ವಿಭಾಗದಲ್ಲಿ ಬರುವ 80 ಕ್ಷೇತ್ರಗಳಲ್ಲಿ ವ್ಯಾಪಕ ಪ್ರವಾಸ ಮತ್ತು ರ್ಯಾಲಿಗಳನ್ನು ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎರಡನೇ ಹಂತದ ನಾಯಕರು ಮತ್ತು ಆಯಾ ಜಿಲ್ಲೆಯ ಮುಖಂಡರು 'ಬಿ' ವಿಭಾಗದ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಪ್ರಚಾರದಲ್ಲಿ ತೊಡಗುತ್ತಾರೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos