ರಾಜಕೀಯ

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ನಿರ್ಧಾರ ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ

Lingaraj Badiger
ಅಫ್ಜಲಪುರ: ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾನಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವೀರಶೈವ ಮತ್ತು ಲಿಂಗಾಯತ ಸಮುದಾಯಗಳೆರಡು ಒಟ್ಟಾಗಿ ಬಂದು ಪ್ರತ್ಯೇಕ ಧರ್ಮಕ್ಕಾಗಿ ಮನವಿ ಮಾಡಿದೆ ಮಾತ್ರ ಶಿಫಾರಸು ಮಾಡಲಾಗುವುದು ಎಂದು ಹೇಳಿದ್ದಾರೆ.
ವೀರಶೈವ ಮಹಾಸಭಾ, ವೀರಕ್ತ ಮಠ, ಪಂಚ ಪೀಠ ಮತ್ತು ಮಾತೇ ಮಹಾದೇವಿಯವರು ಸೇರಿದಂತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಸರ್ಕಾರಕ್ಕೆ ಐದು ಪ್ರತ್ಯೇಕ ಮನವಿಗಳು ಬಂದಿವೆ. ಆದರೆ ಅವರು ಒಟ್ಟಾಗಿ ಮನವಿ ಮಾಡಿಲ್ಲ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ಐದು ಮನವಿಗಳನ್ನು ಅಲ್ಪ ಸಂಖ್ಯಾತ ಆಯೋಗಕ್ಕೆ ಕಳುಹಿಸಲು ನಿರ್ಧರಿಸಿದ್ದು, ಇದನ್ನು ಪರಿಗಣಿಸಿ ಆಯೋಗ ತಜ್ಞರ ಸಮಿತಿ ನೇಮಕ ಮಾಡಲಿದೆ. ಬಳಿಕ ತಜ್ಞರ ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆಯಷ್ಟೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕಳೆದ ಮೂರು ತಿಂಗಳಲ್ಲಿ ಲಿಂಗಾಯತ ಮತ್ತು ವೀರಶೈವ ಧರ್ಮಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಯಾವುದೇ ಫಲ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಲಿಂಗಾಯತ ಸಮುದಾಯವನ್ನು ಅಲ್ಪಸಂಖ್ಯಾತ ಧರ್ಮವೆಂದು ಗುರುತಿಸಬೇಕೆಂದು ಅಲ್ಪಸಂಖ್ಯಾತ ಆಯೋಗಕ್ಕೆ ಸದ್ಯದಲ್ಲಿಯೇ ರಾಜ್ಯ ಸರ್ಕಾರ ಶಿಫಾರಸು ಮಾಡಲಿದೆ ಎಂದು ವರದಿ ಮಾಡಲಾಗಿತ್ತು.
SCROLL FOR NEXT