ಶಿವಮೊಗ್ಗ: ರಾಯಣ್ಣ ಬ್ರಿಗೇಡ್ ಮುಗಿದ ಅಧ್ಯಾಯ, ಬಿಜೆಪಿ ಒಬಿಸಿ ಮೋರ್ಚಾ ಮೂಲಕವೇ ದಲಿತರು, ಹಿಂದುಳಿದ ವರ್ಗದ ಜನರನ್ನು ಸಂಘಟಿಸುವುದಾಗಿ ವಿಧಾನ ಪರಿಷತ್ ನಾಯಕ ಕೆ.ಎಸ್ ಈಶ್ವರಪ್ಪ ಸ್ಪಷ್ಟ ಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಧ್ಯಕ್ಷ ಅಮಿತ್ ಷಾ ಕಟ್ಟುನಿಟ್ಟಿನ ಸೂಚನೆ ನೀಡಿದ ಕಾರಣ ರಾಯಣ್ಣ ಬ್ರಿಗೇಡ್ನಿಂದ ಹಿಂದೆ ಸರಿದಿದ್ದೇನೆ. ಬ್ರಿಗೇಡ್ ಪದಾಧಿಕಾರಿಗಳು ಬಿಜೆಪಿಗೆ ಸೇರಲು ಪಕ್ಷದ ವರಿಷ್ಠರು ಸಮ್ಮತಿಸಿದ್ದಾರೆ ಎಂದು ಖಚಿತ ಪಡಿಸಿದ್ದಾರೆ.
ರಾಜ್ಯದ ಜನರು, ಪಕ್ಷದ ಕಾರ್ಯಕರ್ತರ ಗೊಂದಲ ನಿವಾರಣೆಗಾಗಿ ಬ್ರಿಗೇಡ್ ಚಟುವಟಿಕೆ ಸ್ಥಗಿತಗೊಳಿಸಲು ಒಪ್ಪಿಗೆ ನೀಡಿದ್ದೇನೆ. ಬ್ರಿಗೇಡ್ ಮುಖಂಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ನೀಡುವುದಾಗಿ ಅಮಿತ್ ಷಾ ಭರವಸೆ ನೀಡಿದ್ದಾರೆ ಎಂದು ಹೇಳಿದ ಅವರು, ಅಕ್ರಮ ಆಸ್ತಿ ಗಳಿಸಿದ್ದೇನೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿರುವ ವಕೀಲ ವಿನೋದ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.