ರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಜಿಲೇಬಿ' ವಿಷಯಕ್ಕೆ ತರಾಟೆ ತೆಗೆದುಕೊಂಡ ಜಗದೀಶ್ ಶೆಟ್ಟರ್

Sumana Upadhyaya
ಬೆಂಗಳೂರು: ಕಲ್ಯಾಣ ಯೋಜನೆಗಳಲ್ಲಿ ಜಾತಿಯ ವಿಚಾರಗಳನ್ನು ಸಿದ್ದರಾಮಯ್ಯ ಸರ್ಕಾರ ಪರಿಗಣಿಸುತ್ತಿದೆ ಎಂದು ಬಿಜೆಪಿ ವಿಧಾನಸಭೆಯಲ್ಲಿ ಆರೋಪಿಸಿದೆ.
ಆಡಳಿತದಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಟೀಕಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈ ಸರ್ಕಾರ ಜಿಲೇಬಿಗೆ ಸಂಬಂಧಿಸಿದ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರ ಜಿಲೇಬಿ ಮತ್ತು ನಾನ್ ಜಿಲೇಬಿ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಆಡಳಿತ ನಡೆಸುವವರ ಸಂಕೇತ ಭಾಷೆಯಲ್ಲಿ ಜಿಲೇಬಿ ಎಂದರೆ ಗೌಡ, ಲಿಂಗಾಯತ ಹಾಗೂ ಬ್ರಾಹ್ಮಣ ಸಮುದಾಯ. ಜಿಲೇಬಿಗೆ ಸಂಬಂಧಿಸಿದ ಕಡತಗಳು ಹೋದರೆ ಪಕ್ಕಕ್ಕೆ ಇಡಲಾಗುತ್ತದೆ. ಅದೇ ನಾನ್ ಜಿಲೇಬಿ ಅಂದರೆ ಇತರೆ ಜಾತಿಯವರಿಗೆ ಸಂಬಂಧಿಸಿದ ಕಡತಗಳು ಬಂದರೆ ತಕ್ಷಣ ವಿಲೇವಾರಿ ಆಗುತ್ತವೆ ಎಂದು ಟೀಕಿಸಿದರು.
ಕಾಂಗ್ರೆಸ್ ಸದಸ್ಯ ಪಿ.ಎಂ.ನಾರಾಯಣಸ್ವಾಮಿ ಈ ಆರೋಪವನ್ನು ಸಾಬೀತುಪಡಿಸುವಂತೆ ಹೇಳಿದರು.
ಈ ಸವಾಲನ್ನು ಸ್ವೀಕರಿಸಿ ಮಾತನಾಡಿದ ಶೆಟ್ಟರ್, ಈ ಸಾಲಿನ ಬಜೆಟ್ ನಲ್ಲಿ ಮೌಲ್ವಿಗಳ ಗೌರವಧನವನ್ನು ಹೆಚ್ಚಿಸಿ ಮಸೀದಿಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ ಬೃಹತ್ ಮೊತ್ತ ಮೀಸಲಿಡಲಾಗಿದೆ. ದೇವಾಲಯದ ಅರ್ಚಕರ ವೇತನ ಹೆಚ್ಚಳದ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಇಮಾಮ್ ಗಳ ಗೌರವ ವೇತನವನ್ನು 3,100 ರೂಪಾಯಿಗಳಿಂದ 4,000ಕ್ಕೆ ಮತ್ತು ಮೌಝಿನ್ಸ್ ಗಳ ವೇತನವನ್ನು 2,500ರಿಂದ 3,000ಕ್ಕೆ ಏರಿಕೆ ಮಾಡಲಾಗಿದೆ. ಅದೇ ಮುಜರಾಯಿ ಇಲಾಖೆಗಳ ದೇವಾಲಯಗಳ ಅರ್ಚಕರಿಗೆ ತಿಂಗಳಿಗೆ ಕೇವಲ 3,000 ರೂಪಾಯಿ ವೇತನ ನೀಡಲಾಗುತ್ತದೆ. ಅದರಲ್ಲಿ ತಿಂಗಳಿಗೆ 200 ರೂಪಾಯಿ ದೀಪ, ಊದುಬತ್ತಿ,ಕರ್ಪೂರಕ್ಕೆ ವೆಚ್ಚವಾಗುತ್ತದೆ ಎಂದು ವಿವರಿಸಿದರು.
SCROLL FOR NEXT