ಬಿಜೆಪಿ ನಾಯಕರಿಂದ ಸರ್ಕಾರದ ವೈಫಲ್ಯಗಳ ಕಿರುಹೊತ್ತಗೆ ಬಿಡುಗಡೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ 4 ವರ್ಷಗಳ ಅಭಿವೃದ್ಧಿ ಹಾಗೂ ಸಾಧನೆಗಳನ್ನು ಜನರಿಗೆ ತಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ರಾಜ್ಯದ ಜನತೆ ಮುಂದಿಟ್ಟಿದೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ 29 ಅಂಶಗಳ ಚಾರ್ಜ್ ಶೀಟ್ ಪಟ್ಟಿ ಮಾಡಿರುವ ಬಿಜೆಪಿ ಸರ್ಕಾರದ ವೈಫಲ್ಯಗಳ ಕುರಿತ 63 ಪುಟಗಳ 'ಸರ್ಕಾರದ ವೈಫಲ್ಯ ಪ್ರತಿಪಕ್ಷದ ಸಾಫಲ್ಯ' ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದೆ.
ಭ್ರಷ್ಟಾಚಾರ ವಿರುದ್ಧ ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆದರೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಭ್ರಷ್ಟಾಚಾರದಲ್ಲೂ ರಾಜ್ಯವನ್ನು ದೇಶದಲ್ಲಿಯೇ ಒಂದನೇ ಸ್ಥಾನಕ್ಕೆ ಕೊಂಡೊಯ್ದಿದ್ದೇ ಕಾಂಗ್ರೆಸ್ ಸಾಧನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯದಲ್ಲಿ 2,573 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಆದರೆ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಸ್ಥರಿಗೆ ಸರ್ಕಾರ ಇನ್ನೂ ಪರಿಹಾರಧನ ವಿತರಿಸಿಲ್ಲ ಎಂದು ದೂರಿದ್ದಾರೆ. ಭಾಗ್ಯಗಳ ನೆಪದಲ್ಲಿ ನಾಲ್ಕು ವರ್ಷಗಳಲ್ಲ 1.28 ಲಕ್ಷ ಸಾವಿರ ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲ ಪರೀಕ್ಷೆಯಲ್ಲಿಯೂ ಸರ್ಕಾರ ಅನುತ್ತೀರ್ಣವಾಗಿದೆ. ಈಗ ಕೋಮಾ ಸ್ಥಿತಿಗೆ ತಲುಪಿದೆ. ಬುಧವಾರ ರಾಜ್ಯದ ಉಸ್ತುವಾರಿ ಎದುರೇ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದರು. ಮುಖ್ಯಮಂತ್ರಿಯನ್ನು ಎಬ್ಬಿಸಿ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚೀಟಿ ನೀಡಿದ್ದರು. ಸರ್ಕಾರ ನಿದ್ರಾವಸ್ಥೆಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೇ’ ಎಂದು ಅವರು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅವರು ಗೈರಾಗಿದ್ದರು. ಈ ಸಂಬಂಧ ಜಗದೀಶ್ ಶೆಟ್ಟರ್ ಅವರನ್ನು ಪ್ರಶ್ನಿಸಲಾಯಿತು, ಈಶ್ವರಪ್ಪ ಅವರಿಗೆ ಇದೇ ಸಮಯಕ್ಕೆ ಬೇರೊಂದು ಕೆಲಸ ನಿರ್ಧಾರವಾಗಿತ್ತು. ಹೀಗಾಗಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಶೆಟ್ಟರ್ ವಿವರಿಸಿದರು
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos