ಕಲಬುರಗಿ: ರಾಜ್ಯದಲ್ಲಿ ಡಿಸೆಂಬರ್ನಲ್ಲೇ ವಿಧಾನಸಭಾ ಚುನಾವಣೆ ನಡೆದರೆ ಅಚ್ಚರಿಯಿಲ್ಲ. ಅವಧಿಗೆ ಮುನ್ನ ಚುನಾವಣೆ ನಡೆಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಅವಧಿಗೂ ಮುನ್ನ ಚುನಾವಣೆ ನಡೆಸುವುದು ಬೇಕಿದೆ. ಮುಂದಿನ ವರ್ಷದ ಎಪ್ರಿಲ್ ಅಥವಾ ಮೇ ನಲ್ಲಿ ಚುನಾವಣೆ ನಡೆಯಬೇಕಿತ್ತು, ಆದರೆ ಕಾಂಗ್ರೆಸ್ ಬೇಗನೆ ಚುನಾವಣೆಗೆ ಹೋಗಲು ಸಿದ್ಧವಾಗುತ್ತಿದೆ , ಬಿಜೆಪಿ ಕೂಡ ಯಾವುದೇ ಸಮಯದಲ್ಲಿ ಚುನಾವಣೆ ಎದುರಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.
ಆನೇಕಲ್ನಲ್ಲಿ ಕಳೆದ 6 ತಿಂಗಳಲ್ಲಿ ರಾಜಕೀಯ ವೈಷಮ್ಯ ಹಿನ್ನಲೆ 3 ಕೊಲೆ ಆಗಿವೆ. ನಿನ್ನೆಯೂ ಬಿಜೆಪಿ ಕಾರ್ಯಕರ್ತನ ಹರೀಶ್ ಎಂಬಾತನ ಹತ್ಯೆಯಾಗಿದ್ದು, ತನಿಖೆ ವಿಳಂಬ ಮಾಡಿ ಕೇಸ್ ಮುಚ್ಚಿ ಹಾಕಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜೂನ್ 30ರೊಳಗೆ ರೈತರ ಸಾಲಮನ್ನಾ ಮಾಡಬೇಕು ಇಲ್ಲದಿದ್ದರೇ 5 ಲಕ್ಷಕ್ಕೂ ಅಧಿಕ ರೈತರು ಬೆಂಗಳೂರಿನಲ್ಲಿ ಜುಲೈ 15 ಮತ್ತು 16 ರಂದು ಬೃಹತ್ ಪ್ರತಿಭಟನಾ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.