ಬೆಳಗಾವಿ: ವೈದ್ಯರ ಇತ್ತೀಚಿನ ಮುಷ್ಕರದ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆ-2017ರಿಂದ ಖಾಸಗಿ ಆಸ್ಪತ್ರೆಗಳ ಮಾಲಿಕರು ಮತ್ತು ವೈದ್ಯರಿಗೆ ಜೈಲು ಶಿಕ್ಷೆಯನ್ನು ಕೈಬಿಟ್ಟಿದೆ.
ನಿನ್ನೆ ಬೆಳಗಾವಿಯ ವಿಧಾನ ಸಭೆ ಕಲಾಪದಲ್ಲಿ ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಪರಿಷ್ಕೃತ ಮಸೂದೆಯನ್ನು ಮಂಡಿಸಿದರು. ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಕಾಯ್ದೆಯನ್ನು ಉಲ್ಲಂಘಿಸಿದ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಮತ್ತು ಮಾಲಿಕರಿಗೆ 6 ತಿಂಗಳಿನಿಂದ 5 ವರ್ಷದವರೆಗೆ ಶಿಕ್ಷೆ ನೀಡಬಹುದಾಗಿತ್ತು. ಆದರೆ ಪರಿಷ್ಕೃತ ಮಸೂದೆಯಲ್ಲಿ 25,000ದಿಂದ 1 ಲಕ್ಷದವರೆಗೆ ದಂಡ ಮಾತ್ರ ವಿಧಿಸಲಾಗುತ್ತದೆ.