ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಉತ್ತರ ಕರ್ನಾಟಕದಿಂದ ಕಣಕ್ಕಿಳಿಸಬೇಕೆಂದು ನಿರ್ಧರಿಸಿರುವ ಅಮಿತ್ ಶಾ ತಂತ್ರ ಕೇವಲ ಟ್ರೇಲರ್ ಅಷ್ಟೆ, ಮುಂದಿನ ದಿನಗಳಲ್ಲಿ ಹಲವು ಬಿಜೆಪಿ ನಾಯಕರು ಇದೇ ತಂತ್ರಕ್ಕೆ ಒಳಗಾಗಲಿದ್ದಾರೆ.
ಶಿಕಾರಿಪುರ ಕ್ಷೇತ್ರ ಬಿಟ್ಟು ಉತ್ತರ ಕರ್ನಾಟಕದಿಂದ ಯಡಿಯೂರಪ್ಪ ಸ್ಪರ್ಧಿಸಲಿದ್ದಾರೆ ಎಂಬ ವಿಷಯ ಪಕ್ಷದಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಜಗದೀಶ್ ಶೆಟ್ಟರ್, ಆರ್. ಅಶೋಕ, ಕೆ.ಎಸ್ ಈಶ್ವರಪ್ಪ, ಸಿ.ಟಿ ರವಿ ಅವರಂತ ಪ್ರಮುಖ ನಾಯಕರನ್ನು ತಮ್ಮ ಕ್ಷೇತ್ರಗಳನ್ನು ಬಿಟ್ಟು ಜಯಗಳಿಸಲು ಕಷ್ಟಸಾಧ್ಯವಾಗಿರುವಂತ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಸೂಚಿಸಲು ಅಮಿತ್ ಶಾ ತಂತ್ರಗಾರಿಕೆ ರೂಪಿಸಿದ್ದಾರೆ.
ಸದ್ಯ ಈ ನಾಯಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಗೆ ಗೆಲ್ಲುವಂತ ಸೂಕ್ತ ಹೊಸ ಅಭ್ಯರ್ಥಿಗಳನ್ನು ಕಣಕ್ಕಳಿಸಲಾಗುವುದು ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಆರ್ .ಅಶೋಕ ಮತ್ತು ಸಿ,ಟಿ ರವಿ ಅವರನ್ನು ಕಣಕ್ಕಿಳಿಸಲು ಚಿಂತಿಸಲಾಗುತ್ತಿದೆ, ಈ ಭಾಗದಲ್ಲಿ ಸಕ್ರಿಯ ರಾಗಿರುವ ಎಸ್ .ಎಂ ಕೃಷ್ಣ ಪ್ರಚಾರದಿಂದ ಬಿಜೆಪಿ ಗೆಲ್ಲಲು ಸಾಧ್ಯವಿದೆ ಎಂಬ ತಂತ್ರವಾಗಿದೆ.
ಆರ್. ಅಶೋಕ ಮತ್ತು ಜಗದೀಶ್ ಶೆಟ್ಟರ್ ಅವರಂಥ ನಾಯಕರು ಪಕ್ಷ ಗೆಲ್ಲಲು ಕಷ್ಟ ಎಂಬಂತಹ ಕ್ಷೇತ್ರಗಳಲ್ಲೂ ತಮ್ಮ ವರ್ಚಸ್ಸಿನಿಂದ ಬಿಜೆಪಿ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಶಾ ಅಭಿಪ್ರಾಯ. ಇನ್ನು ಈ ನಾಯಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಗೆಲ್ಲಿಸುವುದು ಕೂಡ ಕಷ್ಟವಾಗುವುದಿಲ್ಲ ಎಂಬುದು ಪಕ್ಷದ ನಿರ್ಧಾರವಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ತಮಗೆ ಈ ಯೋಜನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos