ರಾಜಕೀಯ

ಬಸವ ಜಯಂತಿಯಂದು ಅಮಿತ್ ಶಾ ಬೆಂಗಳೂರಿಗೆ, ಚುನಾವಣೆ ಪ್ರಚಾರ ಚುರುಕಿಗೆ ಕ್ರಮ

Raghavendra Adiga
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರವನ್ನು ಇನ್ನಷ್ಟು ಬಿರುಸುಗೊಳಿಸುವ ಸಲುವಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್  ಶಾ ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. 
ಎರಡು ದಿನಗಳ ಭೇಟಿಗಾಗಿ ಆಗಮಿಸುತ್ತಿರುವ ಶಾ ಬಸವ ಜಯಂತಿಯಂದೇ ಬೆಂಗಳೂರಿಗೆ ಆಗಮಿಸುತ್ತಿರುವುದು ಒಂದು ವಿಶೇಷ. ಸಧ್ಯ ಬಿಜೆಪಿ ತನ್ನ ಲಿಂಗಾಯತ ಮತಗಳು ಚದುರಿ ಹೋಗದಂತೆ ಒಗ್ಗೂಡಿಸಲು ಹೆಣಗುತ್ತಿದ್ದು  ಶಾ ಇಂದು ಪಕ್ಷದ ಚುನಾವಣೆ ಪ್ರಣಾಳಿಕೆ ಬಗ್ಗೆ ಚರ್ಚಿಸುವ ಸಲುವಾಗಿ ಖ್ಯಾತ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ, ಕವಿ ಡಾ. ಸಿದ್ದಲಿಂಗಯ್ಯನವರನ್ನು ಭೇಟಿಯಾಗಲಿದ್ದಾರೆ.
"ಪಕ್ಷದ ಪ್ರಣಾಳಿಕೆ ತಯಾರಿಗಾಗಿ ವಿದ್ಯಾರ್ಥಿಗಳು, ಕಾರ್ಮಿಕ ವರ್ಗದವರು, ಬುದ್ಧಿಜೀವಿಗಳು ಮತ್ತು ಇತರರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವ ಪ್ರಯತ್ನದ ಸಾಂಕೇತಿಕ ಪ್ರತಿನಿಧಿಯಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ದಿನಗಳ ಕಾಲ ಬೆಂಗಳೂಗೆ ಆಗಮಿಸುತ್ತಾರೆ." ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಚಾಲುಕ್ಯ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾ ತಮ್ಮ ಬೆಂಗಳೂರಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.ಡಾ. ಮೂರ್ತಿ ಹಾಗೂ ಸಿದ್ದಲಿಂಗಯ್ಯ ಅವರೊಂದಿಗಿನ ಸಮಾಲೋಚನೆಯ ಬಳಿಕ  ಪಕ್ಷದ ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಟಿಕೆಟ್ ಸಿಕ್ಕದ ಆಕಾಂಕ್ಷಿಗಳ ಭಿನ್ನಾಭಿಪ್ರಾಯಗಳಿರುವಂತೆಯೇ ಶಾ ಅವರೊಡನೆ ಪಕ್ಷದ ಆಯಾ ಪ್ರಾದೇಶಿಕ ಕಾರ್ಯ್ಯದರ್ಶಿಗಳ ಮಟ್ಟದ ಸಭೆಯೂ ನಡೆಯಲಿದೆ. ಬಿಜೆಪಿ ಇದಾಗಲೇ ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರೂ ಸಹ ಇನ್ನೂ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ  ಟಿಕೆಟ್ ಸಿಕ್ಕದ ನಾಯಕರ ಅಸಮಾಧಾನದ ಹೊಗೆ ರಾಜ್ಯದಾದ್ಯಂತ ವ್ಯಾಪಿಸಿದೆ. ಇದಾಗಲೇ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿದೆ.
ಬುಧವಾರ ಮಧ್ಯಾಹ್ನ ಅಮಿತ್ ಶಾ ಹೊಸಕೋಟೆಯಲ್ಲಿ ರೋಡ್ ಶೋ ನಡೆಸಲಿದ್ದು ಇದರೊಡನೆ ಶಾ ಅವರ ಬಿಧವಾರದ  ನಿಗದಿತ ಕಾರ್ಯಕ್ರಮ ಅಂತ್ಯವಾಗಲಿದೆ.
ಗುರುವಾರದಂದು ಶಾ ಚುನಾವಣೆ ಜವಾಬ್ದಾರಿ ಹೊತ್ತ ಪ್ರಾದೇಶಿಕ ನಾಯಕರೊಡನೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಜತೆಗೆ ತಾವು ಕೆಲವು  ಉದ್ಯಮಿಗಳನ್ನು ಭೇಟಿಯಾಗಲಿದ್ದಾರೆ.
SCROLL FOR NEXT