ಬೆಂಗಳೂರು: 'ಶಿಕಾರಿಪುರದಲ್ಲಿ ಒಬ್ಬ ಹೆಣ್ಣು ಬಾಕ ಇದ್ದಾನೆ. ಅವನ ಸಿಡಿ ಹಾಲಪ್ಪಗೆ ಸಿಕ್ಕಿರಬೇಕು, ಅದನ್ನೇ ತೋರಿಸಿ ಹೆದರಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಂದ ಟಿಕೆಟ್ ಪಡೆದಿದ್ದಾನೆ ಎಂದು ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.
ತಮಗೆ ಟಿಕೆಟ್ ಕೈತಪ್ಪಿದ್ದಕ್ಕೆ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ರಾಘವೇಂದ್ರ ಅವರ ವಿರುದ್ಧ ಇಂದು ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೇಳೂರು, 'ಹಾಲಪ್ಪ ಪಕ್ಷ ಬಿಟ್ಟು ಮೂರು ದಿನ ಅಡಗಿ ಕುಳಿತಿದ್ದ. ಆಗ ಇದೇ ಶೋಭಾ ಮೇಡಂ, ಭಾರತಿ ಶೆಟ್ಟಿ ಮತ್ತು ರಾಘವೇಂದ್ರ ಹೋಗಿ ವಾಪಸ್ ಕರೆ ತಂದಿದ್ದರು' ಎಂದರು.
ಕೆಜೆಪಿಯಿಂದ ಬಿಜೆಪಿಗೆ ಬಂದವರಿಗೆಲ್ಲಾ ಟಿಕೆಟ್ ನೀಡಲಾಗಿದೆ. ನಾನು ಯಡಿಯೂರಪ್ಪ ಜೊತೆ ಕೆಜೆಪಿಗೆ ಹೋಗಲಿಲ್ಲ. ಹೀಗಾಗಿ ಟಿಕೆಟ್ ತಪ್ಪಿಸಿದ್ದಾರೆ. ನನಗೆ ಟಿಕೆಟ್ ತಪ್ಪಲು ಯಡಿಯೂರಪ್ಪ ಮನೆ ಮಗ ಮತ್ತು ಶೋಭಾ ಕರಂದ್ಲಾಜೆ ಅವರು ಕಾರಣ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡು, ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ನೋಡಿಕೊಂಡಿದ್ದಾರೆ ಎಂದು ದೂರಿದರು.
ನನಗೆ ಜೆಡಿಎಸ್ ನವರು ಕರೆದಿದ್ದಾರೆ. ಆದರೆ ನಾನು ಹೋಗುವುದಿಲ್ಲ. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ನನ್ನ ಸಾಮರ್ಥ್ಯ ಏನು ಅಂತ ಬಿಎಸ್ ವೈ ತೋರಿಸುತ್ತೇನೆ ಎಂದರು.
ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಬೇಳೂರು, ಶೋಭಾ ಅವರ ನಿವಾಸದ ಮೇಲೆ ಐಟಿ ದಾಳಿ ನಡೆಸಿದರೆ, ಕೋಟಿ ಕೋಟಿ ರೂಪಾಯಿ ಹಣ ಸಿಗುತ್ತದೆ ಎಂದು ಬಾಂಬ್ ಸಿಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos