ರಾಜಕೀಯ

ಆ. 9 ರಿಂದ ಮೂವರು ನಾಯಕರ ನೇತೃತ್ವದಲ್ಲಿ ಬಿಜೆಪಿ ತಂಡ ರಾಜ್ಯ ಪ್ರವಾಸ

Nagaraja AB

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆ ನಿಟ್ಟಿನಲ್ಲಿ  ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,  ಮತ್ತು ಹಿರಿಯ ಮುಖಂಡ ಕೆ. ಎಸ್. ಈಶ್ವರಪ್ಪ  ನೇತೃತ್ವದಲ್ಲಿನ ಮೂರು ತಂಡಗಳು ಆಗಸ್ಟ್ 9 ರಿಂದ ರಾಜ್ಯ ಪ್ರವಾಸ ಕೈಗೊಂಡಿವೆ.

ಯಡಿಯೂರಪ್ಪ ಬೀದರ್ ಮೂಲಕ ಪ್ರವಾಸ ಆರಂಭಿಸಲಿದ್ದು,  ಕಲಬುರಗಿ. ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೆಂಗಳೂರು ನಗರ, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಚಿಕ್ಕೋಡಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಹಿರಿಯ  ಮುಖಂಡ ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಈ ತಂಡದಲ್ಲಿದ್ದು, ಆಗಸ್ಟ್ 16 ರಂದು ವಿಜಯಪುರದಲ್ಲಿ ಪ್ರವಾಸ ಮುಕ್ತಾಯಗೊಳಿಸಲಿದ್ದಾರೆ.

ಆರ್ ಅಶೋಕ್, ಅರವಿಂದ ಲಿಂಬಾವಳಿ ಶೆಟ್ಟರ್ ತಂಡದಲ್ಲಿದ್ದು, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ,  ಬೆಂಗಳೂರು  ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.

ಸಿ. ಟಿ. ರವಿ. ಲಕ್ಷ್ಮಣ್ ಸವದಿ, ಮತ್ತು ಎ. ನಾರಾಯಣಸ್ವಾಮಿ  ಕೆ.ಎಸ್. ಈಶ್ವರಪ್ಪ ನಾಯಕತ್ವದಲ್ಲಿನ ತಂಡದಲ್ಲಿದ್ದು, ಮಂಡ್ಯ,  ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ದಕ್ಷಿಣ ಕನ್ನಡ,  ಉಡುಪಿ, ಮತ್ತು  ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ತಂಡಗಳ ಪ್ರವಾಸದ ವೇಳಾಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎನ್ . ರವಿಕುಮಾರ್, ಪ್ರತಿ ದಿನ ಎರಡು ಜಿಲ್ಲೆಗಳಲ್ಲಿ  ನಾಯಕರು ಸಂಚರಿಸಲಿದ್ದಾರೆ. ಬಿಜೆಪಿ ಸಂಸದರು, ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಬೂಟ್ ಕಮಿಟಿ, ಪಂಚ ಪ್ರಮುಖ ಹಾಗೂ ಶಕ್ತಿ ಕೇಂದ್ರ ಮುಖ್ಯಸ್ಥರ ನೇಮಕ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

 ಲೋಕಸಭೆ ಚುನಾವಣೆ ಹಾಗೂ ಕರ್ನಾಟಕದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು  ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ಯಡಿಯೂರಪ್ಪ ಸಭೆಯ ಬಳಿಕ ತಿಳಿಸಿದರು.

ಲೋಕಸಭೆ  ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಹಾಗೂ  ಸಿದ್ಧತೆ ಪರಿಶೀಲನೆಗಾಗಿ ಅಮಿತ್ ಶಾ ಈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬಂತಹ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT