ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ರಾಜಕೀಯಕ್ಕೆ ಮರಳುವ ಇರಾದೆ ಹೊಂದಿದ್ದಾರೆ. ಪ್ರಜಾಕೀಯ ಮೂಲಕ ರಾಜಕೀಯ ರಂಗ ಪ್ರವೇಶಿಸುವ ಪ್ರಯತ್ನ ನಡೆಸಿದ್ದ ಉಪ್ಪಿ ರಾಜಕೀಯ ಕಾರಣಗಳಿಂದಾಗಿ ಕಳೆದ ವಿಧಾನಸಭೆ ಚುನವಣೆಗೆ ಸ್ಪರ್ಧಿಸದೆ ದೂರ ಉಳಿದಿದ್ದರು. ಆದರೆ ಈಗ ಮತ್ತೆ ತಮ್ಮದೇ ಸ್ವಂತ ಪಕ್ಷ ಕಟ್ಟಲು ಮುಂದಾಗಿರುವ ನಟ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ಬರುವ ಸೆಪ್ಟೆಂಬರ್ 18ರಂದು ತಮ್ಮ ನೂತನ ಪಕ್ಷದ ಘೋಷಣೆಗೆ ಮಹೂರ್ತ ನಿಗದಿ ಮಾಡಿರುವ ಉಪೇಂದ್ರ ಅಂದು ಹೊಸ ಪಕ್ಷದ ಕುರಿತಂತೆ ವಿವರಗಳನ್ನು ಹೊರಹಾಕಲಿದ್ದಾರೆ.
ಉಪೇಂದ್ರ ಅವರು, ಹೊಸ ಪಕ್ಷದ ಪದಾಧಿಕಾರಿಗಳನ್ನು ಅವರ ಜನ್ಮದಿನದಂದೇ ಘೋಷಿಸಲು ಮುಂದಾಗಿದ್ದು ಅಂದು ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಸ್ಪಷ್ಟ ಘೋಷಣೆ ಮಾಡಲಿದ್ದಾರೆ.
ಉಪೇಂದ್ರ ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಜಾಕೀಯ ಎನ್ನುವ ಹೆಸರಿನಲ್ಲಿ ಕರ್ನಾಟಕ ಪ್ರಜಾ ಜನತಾ ಪಕ್ಷ (ಕೆಪಿಜೆಪಿ) ಎನ್ನುವ ಪಕ್ಷ ಹುಟ್ಟು ಹಾಕಿದ್ದ ಉಪೇಂದ್ರ ವಿಧಾನಸಭೆ ಚುನಾವಣೆ ಘೋಷಣೆಯಾಗುವ ವೇಳೆಗೆ ಪಕ್ಷದ ಅಧ್ಯಕ್ಷರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಪಕ್ಷದಿಂದ ಹೊರ ಬಂದಿದ್ದರು. ಬಳಿಕ ಮತ್ತೆ "ಉತ್ತಮ ಪ್ರಜಾಕೀಯ" ಹೆಸರಿನ ಪಕ್ಷವನ್ನು ಕೇಂದ್ರ ಚುನಾವಣಾ ಆಯೋಗದಲ್ಲಿ ನೊಂದಾಯಿಸಿದ್ದ ಉಪ್ಪಿ ಮುಂದಿನ ತಿಂಗಳು ಪಕ್ಷದ ಕಾರ್ಯಸೂಚಿಗಳನ್ನು ಘೋಷಿಸಲು ತಯಾರಾಗಿದ್ದಾರೆ. ಇದಕ್ಕೆ ಮುನ್ನ ಅವರು ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಳ್ಳುವ ಇರಾದೆ ಇದೆ ಎನ್ನಲಾಗಿದೆ.