ಬೆಂಗಳೂರು: ಮೊನ್ನೆ ಬುಧವಾರ ಸಂಜೆ ಬೆಂಗಳೂರಿನ ಜೆಸಿ ನಗರ ಸಮೀಪ ಚಿನ್ನಪ್ಪ ಗಾರ್ಡನ್ ನಲ್ಲಿ ಕೊಲೆಯಾದ ವ್ಯಕ್ತಿ ಸಂತೋಷ್ ಬಿಜೆಪಿ ಕಾರ್ಯಕರ್ತನಲ್ಲ, ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಆತನನ್ನು ಬಿಜೆಪಿ ಕಾರ್ಯಕರ್ತ ಎಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊಲೆಯಾದವರು, ಸತ್ತವರೆಲ್ಲರನ್ನೂ ಬಿಜೆಪಿ ಕಾರ್ಯಕರ್ತರೆಂದು ಬಿಂಬಿಸುವುದು ಸರಿಯಲ್ಲ. ಅವರ ಮನೆಗೆ ಭೇಟಿ ನೀಡುವುದಿಲ್ಲ. ಆದರೆ ಸಂತೋಷ್ ಕೊಲೆಯ ಬಗ್ಗೆ ಬೇಸರವಿದೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಈಗಾಗಲೇ ಹತ್ಯೆಯ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ ಎಂದು ಹೇಳಿದರು.
ನಿನ್ನೆ ಜೆಸಿ ನಗರ ಹತ್ತಿರ ಜಯಮಹಲ್ ನಲ್ಲಿ ಸಚಿವ ಯುಟಿ ಖಾದರ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಔತಣಕೂಟಕ್ಕೆ ಹೋಗಿದ್ದರು. ಆದರೆ ಅಲ್ಲಿಂದ ಸ್ವಲ್ಪವೇ ದೂರದಲ್ಲಿದ್ದ ಸಂತೋಷ್ ಮನೆಗೆ ಹೋಗಿ ಅವರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಲಿಲ್ಲ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.