ರಾಜಕೀಯ

ರಾಜ್ಯದಲ್ಲಿ ನಡೆದಿರುವ ಕೊಲೆಗಳಿಗೆ ಬಿಜೆಪಿ ಕುಮ್ಮಕ್ಕು: ಮೋದಿ ಆರೋಪಕ್ಕೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

Srinivas Rao BV
ಬೆಂಗಳೂರು: ನಾವು ಉದ್ಯಮ ಸರಳೀಕರಣದ ಬಗ್ಗೆ ಚರ್ಚೆ ನಡೆಸಿದರೆ ಕರ್ನಾಟಕದ ಕಾಂಗ್ರೆಸ್ ನವರು ಸರಣೀ ಹತ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಗೃಹ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ನಡೆದಿರುವ ಕೊಲೆಗಳಿಗೆ ಬಿಜೆಪಿ ಹಾಗೂ ಸಂಘಪರಿವಾರದ ಕುಮ್ಮಕ್ಕು ಇದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. 
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನಿಯಂತ್ರಣದಲ್ಲಿದೆ, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಲೂಟಿ ಹೊಡೆದಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾವೇಶದಲ್ಲಿ ಚಪ್ಪಾಳೆಗಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. 
ಪ್ರಧಾನಿ ಮೋದಿ ಕರ್ನಾಟಕವನ್ನು ಅಪರಾಧಗಳ ರಾಜ್ಯವಾಗುತ್ತಿದೆ ಎಂದು ಆರೋಪಿಸಿದ್ದಾರೆ, ಆದರೆ ನ್ಯಾಷನಲ್ ಕ್ರೈಮ್ ಬ್ಯೂರೋ ದಾಖಲೆಗಳನ್ನು ನೋಡಿದರೆ ಕರ್ನಾಟಕ 10 ನೇ ಸ್ಥಾನದಲ್ಲಿಯೂ ಇಲ್ಲ, ಕರ್ನಾಟಕಕ್ಕಿಂತ ಹೆಚ್ಚು ಬಿಜೆಪಿ ಮುಖ್ಯಮಂತ್ರಿಯೇ ಇರುವ ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ರೆಡ್ಡಿ ಆರೋಪಿಸಿದ್ದಾರೆ. 
ಗುಜರಾತ್ ನಲ್ಲಿ ಗಲಭೆಯಾದಾಗ 2 ಸಾವಿರ ಜನ ಮೃತಪಟ್ಟಿದ್ದರು, ಆಗ ಮೋದಿ ಸಿಎಂ ಆಗಿದ್ದರು, ಸಿಎಂ ಸ್ಥಾನಕ್ಕೆ ಮೋದಿ ರಾಜೀನಾಮೆ ನೀಡಬೇಕಿತ್ತು, ಅದನ್ನು ಮೋದಿ ಮರೆತಿದ್ದಾರೆ, ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ಕಲಾವಿದರು ಎಂದಿರುವ ರಾಮಲಿಂಗಾ ರೆಡ್ಡಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರೆ ತನಿಖೆ ನಡೆಸಲಿ, ರಾಜ್ಯ ಸರ್ಕಾರ ಕೇಂದ್ರದ ಅನುದಾನ ಖರ್ಚು ಮಾಡಿಲ್ಲ ಎಂದಾದರೆ 3.5 ವರ್ಷಗಳು ಮೋದಿ ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ. 
SCROLL FOR NEXT