ರಾಜಕೀಯ

ಕೆಪಿಸಿಸಿ ಅಧ್ಯಕ್ಷರನ್ನೇ 'ಚಮ್ಚಾ...' ಎಂದು ಕರೆದ ಹಿರಿಯ ಕಾಂಗ್ರೆಸ್ ನಾಯಕ ವೈಜನಾಥ್ ಪಾಟೀಲ್

Lingaraj Badiger
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ತಮ್ಮ ಪಕ್ಷದ ಹಿರಿಯ ನಾಯಕರಿಂದಲೇ ಮುಜುಗರಕ್ಕಿಡಾದ ಘಟನೆ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದಿದೆ.
ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ನಡೆಸುತ್ತಿರುವಾಗಲೇ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ವೈಜನಾಥ್ ಪಾಟೀಲ್ ಅವರು ಅಲ್ಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೈಜನಾಥ್ ಪಾಟೀಲ್ ಅವರು ಪರಮೇಶ್ವರ ಅವರನ್ನು ಕರೆದರೂ ಕೂಡಾ ತಿರುಗಿ ನೋಡದೆ ಹೊರಟಿದ್ದರು. ಇದರಿಂದ ಆಕ್ರೋಶಗೊಂಡ ವೈಜನಾಥ್ ಪಾಟೀಲ್ ಅವರು, ಏಯ್ ಅಧ್ಯಕ್ಷ…ಅರೇ ನಾನ್ ಮಾತನಾಡಿಸಿದ್ರೂ ಹಾಗೆ ಹೊಂಟ ಹೋಗುತ್ತಿದ್ದಾನಲ್ರೀ.. ಏಯ್ ಚಮ್ಚಾ.. ಹೀಗೆ ಬಹಿರಂಗವಾಗಿಯೇ ಪರಮೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಮ್ಮ ಪುತ್ರನಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ವೈಜನಾಥ್ ಪಾಟೀಲ್ ಅವರು ಈ ರೀತಿ ಏರುಧ್ವನಿಯಲ್ಲಿ ಕೂಗುವ ಮೂಲಕ ಪರಮೇಶ್ವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಮಗ ವಿಕ್ರಂ ಪಾಟೀಲ್ ಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಟಿಕೆಟ್ ಕೇಳಿದ್ರೆ, ಉಸ್ತುವಾರಿ ಸಚಿವರ ಪತ್ರ ತನ್ನಿ ಎಂದು ಹೇಳುತ್ತಾರೆ. ಆದರೆ ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ ಮಕ್ಕಳಿಗೆ ಮಾತ್ರ ಟಿಕೆಟ್ ಕೊಡುತ್ತಾರೆ. ಅಷ್ಟೇ ಅಲ್ಲ ಪರಂ, ಸಿಎಂನಿಂದಾಗಿ ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
SCROLL FOR NEXT