ಬೆಂಗಳೂರು: ಜೆಡಿಎಸ್ ಸಚಿವರು ಪಕ್ಷದ ಕಚೇರಿಗೆ ಹಾಜರಾಗಿ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸುವುದು ಕಡ್ಡಾಯವಾಗಿದೆ, ತಿಂಗಳಲ್ಲಿ ಒಂದು ಬಾರಿ ಪಕ್ಷದ ಕಚೇರಿಗೆ ಭೇಟಿ ನೀಡಿ ಅಲ್ಲಿ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಬೇಕು ಎಂದು ಜೆಡಿಎಸ್ ಉನ್ನತ ಮಟ್ಟದ ನಾಯಕರು ಫರ್ಮಾನು ಹೊರಡಿಸಿದ್ದಾರೆ.
ಈ ನಿರ್ದೇಶನ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರಿಗೂ ಅನ್ವಯಿಸುತ್ತದೆ. ಬುಧವಾರದಿಂದ ಈ ನಿಯಮ ಜಾರಿಗೆ ಬರಲಿದ್ದು, ಮೊದಲಿಗೆ ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆ ಕೇಳಲಿದ್ದಾರೆ.
ಪ್ರತಿ ತಿಂಗಳು ಯಾವ ಸಚಿವರು ಭೇಟಿ ನೀಡಬೇಕು ಎಂಬ ಬಗ್ಗೆ ಪಕ್ಷ ಶೆಡ್ಯೂಲ್ ನೀಡಲಿದೆ. ಸಚಿವರು ಜೆಪಿ ಭವನಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ, ಮುಖ್ಯಮಂತ್ರಿ ಕುಮಾರ ಸ್ವಾಮಿ ಆಗಸ್ಟ್ 10 ಮತ್ತು ಆಗಸ್ಟ್ 24 ರಂದು ಪಕ್ಷದ ಕಚೇರಿಗೆ ಭೇಟಿ ನೀಡಲಿದ್ದಾರೆ,.
ವಿಧಾನಸೌಧದಲ್ಲಿ ಅಥವಾ ಮನೆಯಲ್ಲಿ ಪಕ್ಷದ ಸಚಿವರನ್ನು ಭೇಟಿ ಮಾಡುವುದು ಕಾರ್ಯಕರ್ತರಿಗೆ ತುಂಬಾ ಕಷ್ಟವಾದ ಹಿನ್ನೆಲೆಯಲ್ಲಿ ಈ ನಿಯಮ ಜಾರಿಗೆ ತರಲಾಗಿದೆ,
ಈ ಪದ್ಧತಿಯನ್ನು ಮೊದಲಿಗೆ ಪರಿಚಯಿಸಿದ್ದು ಮಾಜಿ ಸಿಎಂ ಎಸ್. ಎಂ ಕೃಷ್ಣ , ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅವರು ಸಿಎಂ ಆಗಿದ್ದಾಗ ಈ ನಿಯಮ ಜಾರಿಗೆ ತಂದಿದ್ದರು. ಸಚಿವರು ಕಾರ್ಯಕರ್ತರ ಜೊತೆ ಹೆಚ್ಚು ಒಡನಾಟ ಇಟ್ಟುಕೊಳ್ಳುವುದರಿಂದ ಪಕ್ಷ ಸಂಘಟನೆ ಕಾರ್ಯ ಸುಲಭವಾಗುತ್ತದೆ ಎಂಬ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos