ಬೆಂಗಳೂರು: "ಗಜ ಪ್ರಸವ" ದಂತಾಗಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು ಜೂ.6 ರಂದು ದಿನಾಂಕ ನಿಗದಿಯಾಗಿದೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಜೂ.1 ರಂದು ರಾಜಭವನಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ರಾಜ್ಯಪಾಲರೊಂದಿಗೆ ಚರ್ಚೆ ನಡೆಸಿ ಸಚಿವರ ಪದಗ್ರಹಣಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ. " ಜೂ.03 ರಂದು ಸಚಿವರ ಪದಗ್ರಹಣ ಕಾರ್ಯಕ್ರಮ ನಿಗದಿ ಮಾಡಬೇಕೆಂದುಕೊಂಡಿದ್ದೆವು, ಆದರೆ ಅದೇ ದಿನ ರಾಜ್ಯಪಾಲರಿಗೆ ಪೂರ್ವನಿಗದಿತ ಕಾರ್ಯಕ್ರಮಗಳು ಇರುವುದರಿಂದ ರಾಜ್ಯಪಾಲರ ಸಮಯ ಕೇಳಲಿದ್ದೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯಪಾಲರೊಂದಿಗೆ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಗ್ಗೆ ಚರ್ಚಿಸಲಿದ್ದೇವೆ, ಜೂ.6ರಂದು ಸಚಿವ ಸಂಪುಟ ವಿಸ್ತರಣೆ ಮಾಡಬೇಕೆಂದುಕೊಂಡಿದ್ದೇವೆ, ಜೂ5 ರಂದು ಬೆಳಿಗ್ಗೆ ರಾಜ್ಯಪಾಲರು ದೆಹಲಿಯಿಂದ ವಾಪಸ್ ಬರಲಿದ್ದಾರೆ. ಅವರ ಸಮಯ ಹಾಗೂ ಅನುಮತಿ ಕೇಳಲು ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದೇವೆ ಎಂದು ಹೆಚ್ ಡಿಕೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಉಭಯ ಪಕ್ಷಗಳ ನಾಯಕರು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚಿಸಿದ್ದರು.