ಬಂಡೆಪ್ಪ ಕಾಶೆಂಪುರ್ ಮತ್ತು ಜಿ,ಟಿ ದೇವೇಗೌಡ
ಬೆಂಗಳೂರು: ಉನ್ನತ ಶಿಕ್ಷಣ ಖಾತೆಯನ್ನು ಶಾಸಕ ಜಿ.ಟಿ ದೇವೇಗೌಡ ನಿರಾಕರಿಸಿದ ನಂತರ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಂಪುಟದಲ್ಲಿ ಯಾರು ಉನ್ನತ ಶಿಕ್ಷಣ ಸಚಿವ ಸ್ಥಾನ ಪಡೆಯಲಿದ್ದಾರೆ ಎಂಬ ಬಗ್ಗೆ ಇನ್ನೂ ಗೊಂದಲ ಮುಗಿದಿಲ್ಲ. ಈ ಖಾತೆ ಹೊಂದಲು ಯಾರೋಬ್ಬರು ಮುಂದೆ ಬರುತ್ತಿಲ್ಲ.
ಸದ್ಯ ಬಂಡೆಪ್ಪ ಕಾಶೆಂಪುರ್ ಬಳಿ ಇರುವ ಸಹಕಾರ ಖಾತೆಯನ್ನು ಜಿ.ಟಿ ದೇವೇಗೌಡ ಅವರಿಗೆ ನೀಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕಾಶೆಂಪುರ್ ತಮ್ಮ ಖಾತೆ ಬಿಟ್ಟುಕೊಡಲು ಸಿದ್ದರಾಗಿಲ್ಲ, ಈಗಾಗಲೇ ಇಲಾಖೆಯಲ್ಲಿ ಹಲವು ಮಹತ್ವದ ಬದಲಾವಣೆ ತರುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಖಾತೆ ಬಿಟ್ಟುಕೊಡುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಂದ ಯಾವುದೇ ಮಾಹಿತಿ ಬಂದಿಲ್ಲ, ರೈತರ ಅಗತ್ಯತೆಗಳನ್ನು ಪೂರೈಸಲು ಹಾಗೂ ನೇರವಾಗಿ ಅವರ ಸೇವೆ ಮಾಡಲು ಬಯಸಿ ನಾನು ಸಹಕಾರ ಖಾತೆ ಕೇಳಿದ್ದೆ, ಅದರಂತೆ ಪಡೆದಿದ್ದೇನೆ,ಹೀಗಾಗಿ ಖಾತೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಜಿ.ಟಿ ದೇವೇಗೌಡರಿಗೆ ಸಹಕಾರ ಖಾತೆ ನೀಡಲಾಗುವುದು ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಬಗ್ಗೆ ನನಗೇನು ತಿಳಿದಿಲ್ಲ, ನನಗೆ ನೀಡಿರುವ ಇಲಾಖೆಯಲ್ಲಿ ನಾನು ಈಗಾಗಲೇ ಕೆಲಸ ಆರಂಭಿಸಿದ್ದೇನೆ, ಮುಖ್ಯಮಂತ್ರಿ ಕುಮಾರ ಸ್ವಾಮಿ ವಹಿಸಿರುವ ಖಾತೆಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನನ್ನ ಖಾತೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos