ಬೆಂಗಳೂರು: ಹಲವು ಕನಸು, ಭರವಸೆಗಳೊಂದಿಗೆ ಕೆಪಿಜೆಪಿಗೆ ಸೇರಿ, ರಾಜಕೀಯಕ್ಕೆ ಧುಮುಕಿದ್ದ ನಟ ಉಪೇಂದ್ರ ಇದೀಗ ಕೆಪಿಜೆಪಿ ಪಕ್ಷಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದು, ಶೀಘ್ರ ಹೊಸ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕೆಪಿಜೆಪಿ ಪಕ್ಷದಲ್ಲಿ ತರೆದೋರಿದ ಭಿನ್ನಭಿಪ್ರಾಯದಿಂದ, ಚುನಾವಣೆಗೂ ಮುನ್ನವೇ ಪಕ್ಷ ತೊರೆಯಲು ಉಪೇಂದ್ರ ನಿರ್ಧರಿಸಿದ್ದು, ಹೊಸ ಪಕ್ಷ ಹೊಸ ಚಿನ್ಹೆಯೊಂದಿಗೆ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ. ಬೆಂಗಳೂರಿನ ತಾವರೆಕೆರೆ ಬಳಿ ಇರುವ ರುಪ್ಪೀಸ್ ರೆಸಾರ್ಟ್ ನಲ್ಲಿ ಪ್ರಜಾಕೀಯ ಅಭ್ಯರ್ಥಿಗಳೊಂದಿಗೆ ನಡೆದ ಮಹತ್ವದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಉಪೇಂದ್ರ, ಯಾವುದೇ ಕಾರಣಕ್ಕೂ ತಾವು ತಮ್ಮ ತತ್ವ ಸಿದ್ಧಾಂತಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪ್ರಜಾಕೀಯ ಹೊರತು ಪಡಿಸಿ ರಾಜಕೀಯ ಮಾಡುವುದಿಲ್ಲ. ಇದೇ ಕಾರಣಕ್ಕೆ ತಾವು ಕೆಪಿಜೆಪಿಗೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಘೋಷಣೆ ಮಾಡಿದರು.
ಪ್ರಸ್ತುತ ತಾವು ಹಾಗೂ ತಮ್ಮೊಡನೆ ಇನ್ನು ಐದಾರು ಮಂದಿ ಪಕ್ಷದಿಂದ ಹೊರ ಬರುತ್ತಿದ್ದು, ಪ್ರಜಾಕೀಯ ಪಕ್ಷ ಸ್ಥಾಪಿಸುತ್ತೇವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೇ ಸ್ಪರ್ಧಿಸಲು ಸಕಲ ರೀತಿಯಲ್ಲಿಯೂ ಪ್ರಯತ್ನಿಸಲಾಗುತ್ತದೆ. ಆಗಲಿಲ್ಲವೆಂದರೆ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷವನ್ನು ಕಟ್ಟುತ್ತೇವೆ. ಸ್ವತಂತ್ರ ಅಭ್ಯರ್ಥಿಯಾಗಿಯೂ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದೂ ನಟ ಉಪೇಂದ್ರ ಸ್ಪಷ್ಟಪಡಿಸಿದರು.
ಬಿಜೆಪಿ ಸೇರಲ್ಲ, ಬೆನ್ನಿಗಿರಿಯುವ ಕೆಲಸ ಮಾಡಬೇಡಿ: ಕೆಪಿಜೆಪಿ ಮುಖಂಡರ ವಿರುದ್ಧ ಉಪೇಂದ್ರ ವಾಗ್ದಾಳಿ
ಇದೇ ವೇಳೆ ತಾವು ಹಾಗೂ ತಮ್ನ ಬೆಂಬಲಿಗರು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ ನಟ ಉಪೇಂದ್ರ ಅವರು, ಪ್ರಸ್ತುತ ನಾವು ಪ್ರಜಾಕೀಯವನ್ನು ಅನುಸರಿಸುತ್ತೇವೆ. ಭವಿಷ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳೂ ಕೂಡ ಪ್ರಜಾಕೀಯವನ್ನು ಅನುಸರಿಸಬಹುದು ಎಂದು ಹೇಳಿದರು. ಇದೇ ವೇಳೆ ಮಹೇಶ್ ಗೌಡ ಸೇರಿದಂತೆ ಕೆಪಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಉಪೇಂದ್ರ ನಾನು ಪ್ರಜಾಕೀಯಕ್ಕೆ ಧುಮುಕುವ ಮೊದಲೇ ಮಹೇಶ್ ಗೌಡ ಅವರಿಗೆ ನನ್ನ ಎಲ್ಲ ತತ್ವ ಸಿದ್ಧಾಂತಗಳ ಬಗ್ಗೆ ವಿವರಣೆ ನೀಡಿದ್ದೆ. ಆಗ ಅದಕ್ಕೆಲ್ಲ ಒಪ್ಪಿ ಬಳಿಕ ಪಕ್ಷ ಸ್ಥಾಪನೆ ಬಳಿಕ ಸಿದ್ಧಾಂತ ಮರೆತು ರಾಜಕೀಯ ಆರಂಭಿಸಿದರು. ಟಿಕೆಟ್ ಗಳ ಬಿಫಾರಂ ಮಾರಿಕೊಳ್ಳುತ್ತಿದ್ದಾರೆ. ಈ ಸಂಬಂಧ ದೂರವಾಣಿ ಸಾಕ್ಷ್ಯಗಳಿವೆ. ಯಾವುದೇ ಕಾರಣಕ್ಕೂ ನಿಮ್ಮ ವಿಶ್ವಾಸವಿಟ್ಟಿರುವವರ ಬೆನ್ನಿಗಿರಿಯುವ ಕೆಲಸ ಮಾಡಬೇಡಿ ಎಂದು ಉಪೇಂದ್ರ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos