ಬೆಂಗಳೂರು: 2018 ರ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಈ ಬಾರಿ ಬಿಜೆಪಿಯಿಂದ ಹೊಸ ಮುಖಗಳಿಗೆ ಟಿಕೆಟ್ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಈ ಪೈಕಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಖ್ಯಾತ ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಹೆಸರು ಕೇಳಿಬರುತ್ತಿದೆ.
ಪತ್ರಿಕೋದ್ಯಮದಲ್ಲಿ ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಸಂತೋಷ್ ತಮ್ಮಯ್ಯ ರಾಷ್ಟ್ರೀಯತೆ, ವಿಶೇಷವಾಗಿ ಭಾರತೀಯ ಸೇನೆ, ಯೋಧರ ಬಗೆಗಿನ ಹೊಸದಿಗಂತ ಪತ್ರಿಯ ಉಘೇ ವೀರಭೂಮಿಗೆ ಅಂಕಣದ ಮೂಲಕ ಯುವಜನತೆಯ ನೆಚ್ಚಿನ ಬರಹಗಾರರಾಗಿದ್ದು, ’ಕೊಡವ ತಕ್ಕ್’ (ಕೊಡಗಿನ ಸ್ಥಳೀಯ ಭಾಷೆ) ಯಲ್ಲಿಯೂ ಅವರ ಲೇಖನಗಳು ಅಪಾರ ಜನಪ್ರಿಯತೆ ಗಳಿಸಿ ಈ ವಿಧಾನಸಭಾ ಚುನಾವಣೆಗೆ ಕೊಡಗಿನ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಸಂತೋಷ್ ತಮ್ಮಯ್ಯ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಹೆಸರು ಕೇಳಿಬರುತ್ತಿದೆ. ಈ ಬಗ್ಗೆ ಕನ್ನಡಪ್ರಭ.ಕಾಂ ಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ತಮ್ಮಯ್ಯ "ನಾನು ಆರ್ ಎಸ್ಎಸ್ ಸ್ವಯಂ ಸೇವಕ, ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತ ಅಲ್ಲ. ಅಭ್ಯರ್ಥಿಯಾಗಿ ನನ್ನ ಹೆಸರು ಕೇಳಿಬರುತ್ತಿರುವುದು ಅಚ್ಚರಿಯಾಗಿದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
-ಶ್ರೀನಿವಾಸ್ ರಾವ್
srinivasrao@newindianexpress.com