ಮೈಸೂರು: ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ಮೈಸೂರು ಅರಮನೆಗೆ ಭೇಟಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮೈಸೂರು ಅರಮನೆಗೆ ಆಗಮಸಿದ ಅಮಿತ್ ಶಾ ಮೈಸೂರು ರಾಜವಂಶಸ್ಥರನ್ನು ಭೇಟಿ ಮಾಡಿದರು, ರಾಜಮಾತೆ ಪ್ರಮೋದಾದೇವಿ ಒಡೆಯರ್, ಮಹಾರಾಜ ಯದುವೀರ್ ಒಡೆಯರ್ ಜತೆ ಅಮಿತ್ ಶಾ ಮಾತುಕತೆ ನಡೆಸಿದರು. ಬಳಿಕ ಯದುವೀರ್ ಒಡೆಯರ್ ಮಗುವನ್ನು ಎತ್ತಿಕೊಂಡ ಅಮಿತ್ ಶಾ ಕೆಲಹೊತ್ತು ಆಟವಾಡಿಸಿದರು.
ಇದೇ ಮೊದಲ ಬಾರಿಗೆ ಮೈಸೂರು ಅರಮನೆಗೆ ಅಮಿತ್ ಷಾ ಭೇಟಿ ನೀಡಿದ್ದು, ಅಲ್ಲಿನ ಸಿಬ್ಬಂದಿ ಷಾ ಅವರಿಗೆ ಕಮಲದ ಹೂವು ಕೊಟ್ಟು ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಮಿತ್ ಶಾ ಅವರಿಗೆ ಕೇಂದ್ರ ಸಚಿವ ಅನಂತ್ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ.ರವಿ ಮತ್ತಿತರ ನಾಯಕರು ಸಾಥ್ ನೀಡಿದ್ದರು.
ಇದಕ್ಕೂ ಮೊದಲು ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಸ್ವಾಮೀಜಿ ಷಾ ಅವರಿಗೆ ರುದ್ರಾಕ್ಷಿ ಮಾಲೆ ಹಾಕಿ ಆಶೀರ್ವದಿಸಿದರು. ನಂತರ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದರು. ಕೇಂದ್ರ ಸಚಿವ ಅನಂತ್ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಪ್ರತಾಪ್ಸಿಂಹ್ ಇತರರು ಇದ್ದರು