ಜಮಖಂಡಿ: ರಾಜ್ಯ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಮೇ.06 ರಂದು ಜಮಖಂಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಟು ಶಬ್ದಗಳಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.
ಕಾಂಗ್ರೆಸ್ ನ ದೇಶಭಕ್ತಿಯನ್ನು ಪ್ರಶ್ನಿಸಿರುವ ಪ್ರಧಾನಿ ಮೋದಿ, ಮುಧೋಳ ನಾಯಿಗೆ ಇರುವಷ್ಟೂ ದೇಶಭಕ್ತಿ ಕಾಂಗ್ರೆಸ್ ಗೆ ಇಲ್ಲ, ಕಾಂಗ್ರೆಸ್ ನವರು ಮುಧೋಳ ನಾಯಿಯಿಂದಾರೂ ದೇಶ ಭಕ್ತಿ ಕಲಿಯಬೇಕಿದೆ ಎಂದು ಹೇಳಿದ್ದಾರೆ.
ದೇಶವನ್ನು ಚೂರು ಚೂರು ಮಾಡುತ್ತೇವೆ ಎಂಬ ಘೋಷಣೆ ಕೂಗುವವರಿಗೆ ಕಾಂಗ್ರೆಸ್ ನಾಯಕ ಬೆಂಬಲ ನೀಡುತ್ತಾರೆ ಎಂದು ಸ್ಪಷ್ಟವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶಭಕ್ತಿ, ರಾಷ್ಟ್ರಭಕ್ತಿ, ವಂದೇ ಮಾತರಮ್, ರಾಷ್ಟ್ರಗೀತೆ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಕೆಲವರು ಚಿಂತೆಗೀಡಾಗುತ್ತಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೂ ರಾಷ್ಟ್ರಭಕ್ತಿಯಿಂದಲೇ ಇಂದಿಗೂ ನಾವು ಅಭಿವೃದ್ಧಿಯ ಅಭಿಯಾನ ನಡೆಸುತ್ತಿರುವುದು ದೇಶಭಕ್ತಿಯಿಂದಲೇ ಆದರೆ ಕಾಂಗ್ರೆಸ್ ಗೆ ದೇಶಭಕ್ತಿ ಎಂದರೆ ಆರೋಗ್ಯ ಕೆಡುತ್ತದೆ, ಕಾಂಗ್ರೆಸ್ ಪಕ್ಷ ಕನಿಷ್ಠ ಮುಧೋಳ ನಾಯಿಯಿಂದಾರೂ ದೇಶ ಭಕ್ತಿ ಕಲಿಯಬೇಕಿದೆ ಎಂದು ಸಲಹೆ ನೀಡಿದ್ದಾರೆ.