ಬೆಂಗಳೂರು: ರಾಹುಲ್ ಗಾಂಧಿ ಅವರ ವಿಶ್ವೇಶ್ವರಯ್ಯ ಹೇಳಿಕೆಗೆ ವ್ಯಂಗ್ಯ ಮಾಡಿದ್ದ ಪ್ರಧಾನಿ ಮೋದಿ ಅವರನ್ನು ಮತ್ತೆ ಸಿಎಂ ಸಿದ್ದರಾಮಯ್ಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಈ ಹಿಂದೆ ಬಾಗಲಕೋಟೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ರಾಹುಲ್ ಗಾಂಧಿ ಕರ್ನಾಟಕದ ವಿಶ್ವೇಶ್ವರಯ್ಯ ಅವರ ಹೆಸರು ಉಚ್ಛರಿಸಲು ಸಾಧ್ಯವಾಗಲಿಲ್ಲ ಎಂದು ಟೀಕೆ ಮಾಡಿದ್ದಾರೆ. ಇದೇ ವಿಚಾರದ ಹಿನ್ನಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಬಾಗಲಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಿದ್ದ ತಪ್ಪು ಉಚ್ಚಾರಣೆಯನ್ನು ಸರಿಪಡಿಸವು ನೆಪದಲ್ಲಿ ಅವರ ಕಾಲೆಳೆಯು ಪ್ರಯತ್ನ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಪ್ರಧಾನಿ ಮೋದಿ ಕೂಡಲ ಸಂಗಮವನ್ನು ಕುಂಡಾಲಾ ಸಂಗಮ ಎಂದು ತಪ್ಪಾಗಿ ಉಚ್ಚರಿಸಿದ್ದರು. ಇದೇ ವಿಚಾರವನ್ನು ಟ್ವಿಟರ್ ನಲ್ಲಿ ಪ್ರಸ್ತಾಪ ಮಾಡಿರುವ ಸಿಎಂ ಅದು ಕೂಡಲ ಸಂಗಮ, ಕುಂಡಾಲಾ ಸಂಗಮವಲ್ಲ.. ತಪ್ಪು ಉಚ್ಚಾರಣೆ ದೊಡ್ಡದೇನೂ ಅಲ್ಲ. ಕನ್ನಡಿಗರು ಉದಾರಿಗಳು, ಇಂತಹ ತಪ್ಪುಗಳನ್ನು ಕ್ಷಮಿಸಿಬಿಡುತ್ತಾರೆ. ನಿಮ್ಮ ಉಚ್ಛಾರಣೆಯಲ್ಲಿ ತಪ್ಪನ್ನಿರಿಸಿಕೊಂಡು ಬೇರೆಯವರ ತಪ್ಪಿನ ಬಗ್ಗೆ ಮಾತನಾಡುತ್ತಿರುವುದು ದುಃಖದ ಸಂಗತಿ ಎಂದು ಹೇಳಿದ್ದಾರೆ.
ಅಲ್ಲದೇ ಇದೇ ಟ್ವೀಟ್ ಗೆ ಪ್ರಧಾನಿ ಮೋದಿ ತಪ್ಪು ಉಚ್ಛಾರಣೆಯ ವಿಡಿಯೋವನ್ನು ಕೂಡ ಲಿಂಕ್ ಮಾಡಿದ್ದಾರೆ.