ರಾಜಕೀಯ

ಕೈ ಶಾಸಕರು ಡಿಸಿಎಂ ಆಗುವುದಕ್ಕೆ ದೇವೇಗೌಡರ ತಕರಾರು ಇಲ್ಲ: ಡಿಕೆ ಶಿವಕುಮಾರ್

Nagaraja AB

ಬೆಂಗಳೂರು : ನೂತನ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರು ಉಪಮುಖ್ಯಮಂತ್ರಿ ಸ್ಥಾನ  ಹೊಂದುವ ಬಗ್ಗೆ   ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅವರ ಯಾವುದೇ ತಕರಾರು ಇಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರು ಉಪಮುಖ್ಯಮಂತ್ರಿಯಾಗುವ ಬಗ್ಗೆ ಯಾವುದೇ ವಿವಾದವಿಲ್ಲ, ಉಪಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಕಾಂಗ್ರೆಸ್ ಹಾಗೂ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ದೇವೇಗೌಡರು ನೀಡಿದ್ದಾರೆ ಎಂದು  ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್ ತಿಳಿಸಿದರು.

 ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ  ಡಾ. ಜಿ. ಪರಮೇಶ್ವರ್,  ಡಿ. ಕೆ. ಶಿವಕುಮಾರ್ ಹಾಗೂ ಎಸ್. ಆರ್. ಪಾಟೀಲ್ ಅವರ ಹೆಸರುಗಳನ್ನು ಕೇಳಿಬರುತ್ತಿವೆ. ಬಿಜೆಪಿಗೆ ವಿಶ್ವಾಸಮತ ಲಭಿಸದಂತೆ ಮಾಡುವಲ್ಲಿ ಹಾಗೂ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ಡಿ. ಕೆ. ಶಿವಕುಮಾರ್ ಪ್ರಮುಖವಾದ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದಾರೆ.

 ಸಂಪುಟ ರಚನೆ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ , ಹೆಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಿದ್ದಾರೆ. ತಮ್ಮಗೆ ಹೈಕಮಾಂಡ್ ಯಾವ ಹುದ್ದೆ ನೀಡಿದ್ದರೂ  ಅದನ್ನು ಸಮರ್ಪಕವಾಗಿ ನಿರ್ವಹಿಸುವುದಾಗಿ ಅವರು ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ  ನಡೆಯುವ ವಿಶ್ವಾಸಮತ ಯಾಚನೆ ವೇಳೆ ಅಡ್ಡಮತದಾನದ ಭಯವಿಲ್ಲಾ, ಎಲ್ಲಾ ಶಾಸಕರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಡಿಕೆ ಶಿವಕುಮಾರ್,   ಮೈತ್ರಿ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದು ಸವಾಲಿನಂತಿದೆ. ಜಾತ್ಯತೀತ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿರುವುದಾಗಿ ಅವರು ಹೇಳಿದರು.

SCROLL FOR NEXT