ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಕರ್ನಾಟಕ ವಿಶ್ವಾಸಮತ ಯಾಚನೆ ಮತ್ತು ಸ್ಪೀಕರ್ ಸ್ಥಾನ ಪೈಪೋಟಿಗೆ ಕ್ಷಣಗಣನೆ ಆರಂಭವಾಗಿದ್ದು, ಆಪರೇಷನ್ ಕಮಲದ ಭೀತಿಯಲ್ಲಿಕುವ ಜೆಡಿಎಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ.
ಶನಿವಾರ ವಿಶ್ವಾಸಮತ ಯಾಚನೆಗೂ ಮುನ್ನವೇ ಅಂದರೆ ನಿನ್ನೆಯೇ ಜೆಡಿಎಸ್ ಪಕ್ಷದ ವರಿಷ್ಛರು ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಕಡ್ಡಾಯವಾಗಿ ಸದನಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಪಕ್ಷ ಸೂಚಿಸುವ ಅಭ್ಯರ್ಥಿ ಪರವಾಗಿಯೇ ಮತದಾನ ಮಾಡುವಂತೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ಣಯವನ್ನು ಮಂಡಿಸಲಿದ್ದು, ಇದಾದ ಬಳಿಕ ಸದನದಲ್ಲಿ ಮ್ಯಾಜಿಕ್ ನಂಬರ್ ಸಾಬೀತುಪಡಿಸಿ, ಮುಖ್ಯಮಂತ್ರಿ ಸದನದಲ್ಲಿ ಉತ್ತರ ಕೊಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಜೆಡಿಎಸ್ ನ 37 ಶಾಸಕರಿಗೂ ವಿಪ್ ಜಾರಿಗೊಳಿಸಿದೆ. ಜೆಡಿಎಸ್ ಗೆ ಮುಖ್ಯ ಸಚೇತಕ ನೇಮಕವಾಗಿಲ್ಲದ ಕಾರಣ, ಪಕ್ಷದ ಅಧ್ಯಕ್ಷರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರೇ ವಿಪ್ ಜಾರಿ ಮಾಡಿದ್ದಾರೆ.
ಇನ್ನು ಇಂದು ಮಧ್ಯಾಹ್ನ 12.15 ಕ್ಕೆ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದ್ದು, ಕಳೆದವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಬಿ.ಎಸ್.ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಿಎಂ ಕುಮಾರಸ್ವಾಮಿಯ ಸರದಿಯಾಗಿದ್ದು, ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಕುಮಾರಸ್ವಾಮಿ ಸದನದಲ್ಲಿ ಮ್ಯಾಜಿಕ್ ನಂಬರ್ ಸಾಬೀತುಪಡಿಸಬೇಕಿದೆ.
ವಿಶ್ವಾಸಮತ ಯಾಚನೆಗೂ ಮೊದಲು ಸ್ಪೀಕರ್ ಆಯ್ಕೆಯಾಗಬೇಕಿದ್ದು, ಬಿಜೆಪಿಯಿಂದ ಎಸ್. ಸುರೇಶ್ ಕುಮಾರ್ ಹಾಗೂ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರದ ವತಿಯಿಂದ ಕೆ.ಆರ್.ರಮೇಶ್ ಕುಮಾರ್ ನಡುವೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದಾದ ಬಳಿಕ 12-15ಕ್ಕೆ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಲಿದೆ. ಈಗಾಗಲೇ 222 ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದು, ಇಂದು ನೇರವಾಗಿ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯ ಮಂಡನೆಯಾಗಲಿದೆ.
ಕಾಂಗ್ರೆಸ್ ನಿಂದಲೂ ವಿಪ್ ಜಾರಿ
ಇನ್ನು ಕಾಂಗ್ರೆಸ್ ನಲ್ಲೂ ವಿಪ್ ಜಾರಿಗೊಳಿಸಲಾಗಿದೆ. ಪಕ್ಷದ 78 ಮಂದಿ ಶಾಸಕರಿಗೂ ವಿಪ್ ಜಾರಿ ಮಾಡಲಾಗಿದೆ. ಸ್ಪೀಕರ್ ಚುನಾವಣೆ ಮತ್ತು ಅಧಿವೇಶನದಲ್ಲಿ ಬಹುಮತ ಸಾಬೀತುಪಡಿಸುವವರೆಗೂ ಪಕ್ಷದ ಪರವೇ ನಿಲ್ಲುವಂತೆ ವಿಪ್ ನೀಡಲಾಗಿದೆ. ಕಾಂಗ್ರೆಸ್ ನಲ್ಲಿ ವಿಧಾನಸಭೆಯ ಮುಖ್ಯ ಸಚೇತಕರಿಲ್ಲದ ಕಾರಣ, ವಿಧಾನಪರಿಷತ್ ನ ಮುಖ್ಯ ಸಚೇತಕ ಐವಾನ್ ಡಿಸೋಜಾ ಅವರೇ ವಿಪ್ ಜಾರಿಗೊಳಿಸಿದ್ದಾರೆ. ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ವಿಪ್ ಜಾರಿಗೊಳಿಸಲಾಗಿದೆ ಎನ್ನಲಾಗಿದೆ.