ಬೆಂಗಳೂರು: ಮತದಾರರಿಗೆ ಹಣ ಕುಕ್ಕರ್, ಸೀರೆ ಹಂಚಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಜಯನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಪತ್ರ ಬರೆದಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಆಯೋಗ ವಿಫಲವಾಗಿದೆ. ಹಣ, ಕುಕ್ಕರ್ ಸೀರೆ ಹಂಚಿ ಮತ ಖರೀದಿ ರಾಜಾರೋಷವಾಗಿ ನಡೆಯುತ್ತಿದೆ.
ನಾನು ಆಯೋಗದ ಅನುಮತಿ ಪಡೆದೇ ಇವುಗಳನ್ನು ಹಂಚುತ್ತೇನೆ. ಇದಕ್ಕೆ ಆಯೋಗ ನನಗೆ ಲಿಖಿತವಾಗಿ ಅನುಮತಿ ನೀಡಬೇಕು ಎಂದು ಹೇಳಿದ್ದಾರೆ, ಒಂದು ವೇಳೆ ಆಯೋಗ ಉತ್ತರ ನೀಡದಿದ್ದರೆ ಮೌನಂ ಸಮ್ಮತಿ ಲಕ್ಷಣ ಎಂದು ಭಾವಿಸುತ್ತೇನೆ. ಜೂನ್ 2ರಂದು ಬೆಳಿಗ್ಗೆ 11 ಗಂಟೆಗೆ ಜಯನಗರದ ನಾಲ್ಕನೇ ಬ್ಲಾಕ್ನಲ್ಲಿ ಇವುಗಳನ್ನು ಹಂಚುತ್ತೇನೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಗುಟ್ಟಾಗಿ ಹಂಚುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖಂಡರೊಬ್ಬರು 25 ಸಾವಿರ ಸೀರೆಗಳನ್ನು ಹಂಚಿದ್ದರು. ನನಗೆ ಅಂತಹ ಭಯ ಇಲ್ಲ. ಉಡುಗೊರೆಗಳನ್ನು ಪಡೆಯಲು ಮತದಾರರು ಪ್ರಾಮಾಣಿಕವಾಗಿ ಬರಬೇಕು. 28 ಲಕ್ಷ ಚುನಾವಣಾ ವೆಚ್ಚದ ಮಿತಿಯಲ್ಲೇ ಉಡುಗೊರೆಗಳನ್ನು ನೀಡುತ್ತೇನೆ. ಮತದಾರರ ಗುರುತಿನ ಚೀಟಿ ತೋರಿಸಿ ಇವುಗಳನ್ನು ಪಡೆಯಬೇಕು’ ಎಂದರು.
ಒಂದು ವೋಟಿಗೆ 2.888 ರು ಹಣ, ಒಂದು ಸೀರೆ, ಒಂದು ಕುಕ್ಕರ್, ಒಂದು ನಿಕ್ಕರ್ ನೀಡುತ್ತೇನೆ, ಆದರೆ ನಾನು ಲಿಕ್ಕರ್ ಹಂಚುವುದಿಲ್ಲ, ಏಕೆಂದರೇ ನಾನು ಮದ್ಯಪಾನ ಸೇವಿಸುವ ವಿರೋಧಿಯಾಗಿದ್ದೇನೆ, ಇದು ಗ್ರಾಮೀಣ ಭಾಗಗಳಲ್ಲಿ ಬಡತನ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos