ಡಿ.ಕೆ ಶಿವಕುಮಾರ್ ಮತ್ತು ಎಂ.ಬಿ ಪಾಟೀಲ್
ಬೆಂಗಳೂರು/ ವಿಜಯಾಪುರ/ ಕಲಬುರಗಿ/ ಬೆಳಗಾವಿ: ನವೆಂಬರ್ 3 ರಂದು ನಡೆಯುವ ರಾಜ್ಯ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಕಲ್ಲು ಎಸೆದು, ಕೆಲ ದಿನಗಳಿಂದ ಶಾಂತವಾಗಿದ್ದ ವಿಷಯವನ್ನು ಮತ್ತೆ ಕದಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕಾರಣ, ಹೀಗಾಗಿ ನಾನು ಸಮುದಾಯದವರ ಬಳಿ ಕ್ಷಮೆ ಯಾಚಿಸುತ್ತೇನೆ ಎಂದು ಡಿಕೆಶಿ ಹೇಳಿದ್ದರು.
ಗದಗದ ಲಕ್ಮೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ,ಕೆ ಶಿವಕುಮಾರ್ ನೀಡಿದ್ದ ಕ್ಷಮಾಪಣೆ ಹೇಳಿಕೆಯಿಂದ ಕಾಂಗ್ರೆಸ್ ಮುಖಂಡರಾದ ಎಂ.ಬಿ ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಡಿಕೆಶಿ ವಿರುದ್ಧ ಕೆಂಡಾ ಮಂಡಲವಾಗಿದ್ದರು. ಶ್ರೀಶೈಲ ಸಾರಂಗ ಮಠದ ಸ್ವಾಮೀಜಿ ಕುಪಿತರಾಗಿ ಉತ್ತರ ಕರ್ನಾಟಕ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಡಿಕೆಶಿಗೆ ವಾರ್ನಿಂಗ್ ನೀಡಿದ್ದಾರೆ.
ಆದರೆ ಶುಕ್ರವಾರ ಪ್ರತಿಕ್ರಿಯಿಸಿರುವ ಡಿಕೆಶಿ ತಮ್ಮ ಹೇಳಿಕೆಗೆ ತಾವು ಬದ್ದರಾಗಿದ್ದು, ಈ ವಿಚಾರವಾಗಿ ಬೇರೆ ಯಾರು ಏನು ಹೇಳುತ್ತಾರೆ ಎಂಬುದು ನನಗೆ ಬೇಕಿಲ್ಲ, ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ, ಶಿವಕುಮಾರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಬೆಂಬಲ ನೀಡಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ವಿತಾರವಾಗಿ ನಡೆದ ಹೋರಾಟದಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದರು.. ಹೀಗಾಗಿ ಡಿ.ಕೆ ಶಿವ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಶಿವಕುಮಾರ್ ಅವರಿಗೆ ಹ್ಯಾಬಿಟ್ ಆಗಿದೆ ಎಂದು ಕಿಡಿಕಾರಿದ್ದಾರೆ,
ಈ ಸಂಬಂಧ ಪಕ್ಷದ ಹೈಕಮಾಂಡ್ ಬಳಿ ದೂರು ನೀಡುವುದಾಗಿ ಪಾಟೀಲ್ ಹೇಳಿದ್ದಾರೆ, ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರೂ ಅಲ್ಲ, ಕಾಂಗ್ರೆಸ್ ಪಕ್ಷ ಅವರಿಗೆ ಈ ರೀತಿ ಹೇಳಿಕೆ ನೀಡಲು ಅಧಿಕಾರ ನೀಡಿದೇಯೆ? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಮಾಜಿ ಸಚಿವ ವಿನಯ್ ಕುಲಕರ್ಣಿ ಕೂಡ ಶಿವಕುಮಾರ್ ಹೇಳಿಕೆಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಎಂ.ಬಿ ಪಾಟೀಲ್ ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಶಾಮನೂರು ಶಿವಶಂಕರಪ್ಪ ಶಿವಕುಮಾರ್ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ, ಜೊತೆಗೆ ಪಾಟೀಲ್ ವಿರುದ್ಧ ಹೈಕಮಾಂಡ್ ಗೆ ದೂರು ನೀಡುವ ಬೆದರಿಕೆ ಹಾಕಿದ್ದಾರೆ,
ಸದ್ಯ ಶಿವಕುಮಾರ್ ಹೊತ್ತಿಸಿರುವ ಈ ಧರ್ಮ ಕಿಡಿ ನವೆಂಬರ್ 3 ರಂದು ನಡೆಯುವ ಉಪ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಶಿವಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಇಲ್ಲದಿದ್ದರೇ ಉತ್ತರ ಕರ್ನಾಟಕದಲ್ಲಿ ಶಿವಕುಮಾರ್ ಅವರ ವಿರುದ್ಧ ಪ್ರತಿಭಟನೆ ನಜೆಸಲಾಗುವುದು, ಉತ್ತರ ಕರ್ನಾಟಕಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಶ್ರೀಶೈಲ ಸಾರಂಗ ಮಠ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಆದರೆ ಯಾರೂ ಏನೇ ಹೇಳಿದರು ತಾವು ಜಗ್ಗುವುದಿಲ್ಲ ಎಂದು ಡಿಕೆಶಿ ತಮ್ಮ ಹೇಳಿಕೆಗೆ ಬದ್ದರಾಗಿದ್ದಾರೆ. ಎಂ.ಬಿ.ಪಾಟೀಲ್ ನನ್ನ ಸ್ನೇಹಿತರು, ಹಾಗೆಯೇ ಧರ್ಮದ ಬಗ್ಗೆ ಹೋರಾಟ ಮಾಡುತ್ತಿರುವವರು. ನನ್ನ ಮನಸಾಕ್ಷ್ಯಿಯಂತೆ ನಾನು ಮಾತನಾಡುತ್ತಿದ್ದೇನೆ, ನಾನು ಅವರ ವಿರುದ್ಧ ಮಾತನಾಡುತ್ತಿಲ್ಲ, ನನ್ನ ಹೇಳಿಕೆಗೆ ನಾನು ಬದ್ದನಾಗಿದ್ದೇನೆ, ರಾಜಕರಾರಣಿಗಳು ಧರ್ಮದ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು, ನಾನು ಒಕ್ಕಲಿಗರ ಸಂಘದ ವಿಷಯದಲ್ಲೂ ಭಾಗಿಯಾಗುತ್ತಿಲ್ಲ ಎಂದು ಡಿಕೆಶಿ ಖಡಕೆ ಹೇಳಿಕೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos