ರಾಜಕೀಯ

'ಕೈ'ನಲ್ಲಿ ತಾರಕಕ್ಕೇರಿದ ಸಂಘರ್ಷ: ಸಿದ್ದುಗೆ ಭಿನ್ನಮತ ಶಮನದ ಹೊಣೆ

Manjula VN
ಬೆಂಗಳೂರು: ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರ ನಡುವಿನ ಸಂಘರ್ಷವು ತಾರಕ್ಕೇರಿಸುವ ಹಿನ್ನಲೆಯಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಭಿನ್ನಮತ ಪರಿಹರಿಸುವ ಹೊಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ. 
ಸಿದ್ದರಾಮಯ್ಯ ಅವರು ಯುರೋಪ್ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರವಾಸದಿಂದ ವಾಪಾಸ್ಸಾದ ಬಳಿಕ ತಿಕ್ಕಾಟ ಶಮನಗೊಳಿಸುವ ಪ್ರಯತ್ನ ನಡೆಸಲಿದ್ದಾರೆಂದು ತಿಳಿದುಬಂದಿದೆ. 
ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ತಿಕ್ಕಾಟ ತೀವ್ರಗೊಂಡ ಹಿನ್ನಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿಕೆ ಕೆ.ವೇಣುಗೋಪಾಲ್, ಡಿಕೆ.ಶಿವಕುಮಾರ್'ಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಜಾರಕಿಹೊಳಿ ಸಹೋದರರು ಮತ್ತಷ್ಟು ರೊಚ್ಚಿಗೆದ್ದಿದ್ದರು. 

ನಂತರ ರಮೇಶ್ ಜಾರಕಿಹೊಳಿ ಅವರನ್ನು ಭಾನುವಾರ ಕರೆಸಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು ಯುರೋಪ್ ನಿಂದ ವಾಪಸಾಗುವವರೆಗೆ ಯಾವುದೇ ವಿವಾದ ಮಾಡಿಕೊಳ್ಳಬಾರದೆಂದು ತಾಕೀತು ಮಾಡಿದ್ದಾರೆ. 

ಕಾವೇರಿ ನಿವಾಸದಲ್ಲಿ ಮಾತುಕತೆ ನಡೆಸಿದ ಸಿದ್ದರಾಮಯ್ಯ ಅವರು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಅನಗತ್ಯವಾಗಿ ಭಿನ್ನಾಭಿಪ್ರಾಯ ಹೊಂದುವುದು ಸೂಕ್ತವಲ್ಲ. ಅದು ಕೂಡ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಹೀಗಾಗಿ ಕೂಡಲೇ ಬಹಿರಂಗ ಹೇಳಿಕೆಗಳಿಗೆ ಅಂತಿಮ ಹಾಡಬೇಕು. ನಾನು ಯುರೋಪ್ ನಿಂದ ವಾಪಸಾದ ಬಳಿಕ ಎರಡೂ ಕಡೆಯ ಅಭಿಪ್ರಾಯ ಪಡೆದು ಸಮಸ್ಯೆ ಬಗೆಹರಿಸುತ್ತೇನೆ. ಅಲ್ಲಿಯವರೆಗೂ ಯಾವುದೇ ಸಮಸ್ಯೆ ಮಾಡಿಕೊಳ್ಳಬಾರದು ಹಾಗೂ ಬಹಿರಂಗ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಿದ್ದಾರೆಂದು ತಿಳಿದುಬಂದಿದೆ. 
SCROLL FOR NEXT