2 ದಶಕಗಳ ರಾಜಕೀಯ ಪಾರುಪತ್ಯಕ್ಕೆ ಹೆಬ್ಬಾಳ್ಕರ್ ಬ್ರೇಕ್
ಬೆಳಗಾವಿ: ಕಳೆದ ಎರಡು ದಶಕಗಳಿಂದ ಅಂದರೆ ತಾವು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೂ ಜಾರಕಿಹೊಳಿ ಸಹೋದರರು ಯಾವುದೇ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿರಲಿಲ್ಲ, ತಳಮಟ್ಟದಿಂದಲೂ ಬೆಳಗಾವಿಯಲ್ಲಿ ಅವರು ಬಿಗಿ ಹಿಡಿತ ಸಾಧಿಸಿದ್ದರು.
ಆದರೆ ನಿನ್ನೆ ನಡೆದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಸಂಬಂಧ ಸಹೋದರರು ದಂಗೆಯೆದ್ದಿದ್ದು, ತಮಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಎದುರು ಸೋತಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಪಿಎಲ್ ಡಿ ಬ್ಯಾಂಕ್ ಸೋಲಿನಿಂದ ಕಂಗೆಟ್ಟಿರುವ ಜಾರಕಿಹೊಳಿ ಬ್ರದರ್ಸ್ ತಮ್ಮ ಬೆಂಬಲಿತ 10-12 ಶಾಸಕರೊಂದಿಗೆ ಕೈ ಕೊಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ..ಕಾಂಗ್ರೆಸ್ ತೊರೆಯುವ ಸಂಬಂಧ ಕೇವಲ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಿದಲ್ಲದೇ, ಬಿಜೆಪಿ ನಾಯಕರನ್ನೂ ಭೇಟಿ ಮಾಡಿದ್ದಾರಂತೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ಯಡಿಯೂರಪ್ಪ ಹಾಗೂ ಶಾಸಕ ಶ್ರೀರಾಮುಲು ಜೊತೆ ಮಾತುಕತೆ ನಡೆಸಿದ್ದಾರಂತೆ. ಈ ವೇಳೆ ಬಿಜೆಪಿಯ ಮುಖಂಡರು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಬೆಳಗಾವಿ ರಾಜಕೀಯ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪದೇ ಪದೇ ಹಸ್ತಕ್ಷೇಪ ಮಾಡುತ್ತಿರೋದು ಪ್ರಮುಖ ಕಾರಣ. ಪ್ರತಿ ಸಂದರ್ಭದಲ್ಲೂ ಲಕ್ಷ್ಮಿ ಹೆಬ್ಬಾಳ್ಕರ್ ಪರ ಡಿಕೆಶಿ ನಿಲ್ಲುತ್ತಿದ್ದಾರೆ ಅನ್ನೋದು ಅವರ ಆರೋಪ. ಅಲ್ಲದೇ ಕಾಂಗ್ರೆಸ್ ಹಿರಿಯ ಮುಖಂಡರು ಲಕ್ಷ್ಮೀ ಹೆಬ್ಬಾಳ್ಕರ್ಗೆ ಇದುವರೆಗೂ ಮೂಗುದಾರ ಹಾಕಿಲ್ಲ ಅನ್ನೋದು ಅವರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕಾಂಗ್ರಸೆ ತೊರೆದು ಬಂದರೆ ಜಾರಕಿಹೊಳಿ ಕ್ಯಾಂಪ್ ಗೆ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲು ಬಿಜೆಪಿ ಸಿದ್ಧವಾಗಿದೆ, ಆದರೆ ತಮ್ಮ ಜೊತೆ ಜಾರಕಿಹೊಳಿ ಸಹೋದರರು ಸಂಪರ್ಕದಲ್ಲಿದ್ದಾರೆ ಎಂಬುದನ್ನು ಇದುವರೆಗೂ ಯಾವೊಬ್ಬ ಬಿಜೆಪಿ ನಾಯಕರು ಮಾಹಿತಿ ನೀಡಿಲ್ಲ.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಈಗಾಗಲೇ ಬಿಜೆಪಿಯಲ್ಲಿದ್ದಾರೆ, ಹಿಂದೆ ಬಿಜೆಪಿ ಶಾಸಕರು ಸರ್ಕಾರ ರಚಿಸುವ ಸಂಬಂಧ ನಡೆದ ರಣತಂತ್ರದಲ್ಲಿ ಆಪರೇಷನ್ ಕಮಲದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು, ಆದರೆ ಅದು ವಿಫಲವಾಗಿತ್ತುಷ ಸದ್ಯ ಮೂವರು ಸೋಹದರರು ಒಟ್ಟುಗೂಡಿ ಮುಂದಿನ ಕೆಲ ದಿನಗಳಲ್ಲೇ ಗಂಭೀರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ ರಾಜಕೀಯದಲ್ಲಿ ಮೂಗು ತೂರಿಸುತ್ತಿಲ್ಲ,
ಇನ್ನೂ ಬೆಳಗಾವಿ ರಾಜಕೀಯದಲ್ಲಿ ಸಚಿವ ಡಿ,ಕೆ ಶಿವಕುಮಾರ್ ಗೆ ಏಕೆ ಇಷ್ಟೊಂದು ಆಸಕ್ತಿ ಎಂಬುದು ಜಾರಕಿಹೊಳಿ ಸಹೋದರರಿಗೆ ತಿಳಿಯುತ್ತಿಲ್ಲ, ಜೊತೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಶಿವಕುಮಾರ್ ಏಕೆ ಬೆಂಬಲ ನೀಡುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಆದರೆ ಜಾರಕಿಹೊಳಿ ಕಡೆಯವರಿಂದ ಅವರ ಮುಂದಿನ ನಡೆ ಏನು ಎಂಬುದನ್ನು ಯಾರೂ ತಿಳಿಸುತ್ತಿಲ್ಲ, ಆದರೆ ಒಂದು ಮಾತ್ರ ನಿಜ, ತಮಗಾಗಿರುವ ಅವಮಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಜಾರಕಿಹೊಳಿ ಬ್ರದರ್ಸ್ ತೆಗೆದುಕೊಳ್ಳು ನಿರ್ಧಾರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos