ಬೆಂಗಳೂರು: ಮೈತ್ರಿ ಸರ್ಕಾರದ ಕಾವಲುಗಾರ ಎನಿಸಿಕೊಂಡಿರುವ ಸಿದ್ದರಾಮಯ್ಯ ಯೂರೋಪ್ ಪ್ರವಾಸದಲ್ಲಿರುವಾಗಲೇ ಡಿಸಿಎಂ ಪರಮೇಶ್ವರ್ ಸಚಿವರಿಗೆ ಉಪಹಾರ ಏರ್ಪಡಿಸಿದ್ದು ಭಾರಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಪಕ್ಷ ಹಾಗೂ ಸರ್ಕಾರದಲ್ಲಿ ನಾಯಕತ್ವದ ಅಸ್ತಿತ್ವಕ್ಕಾಗಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಸಚಿವರು ಹಾಗೂ ಶಾಸಕರಿಗೆ ಉಪಾಹಾರ ಪಾಲಿಟಿಕ್ಸ್ ಆರಂಭಿಸಿದ್ದಾರೆ ಎನ್ನಲಾಗಿದೆ, ಪರಮೇಶ್ವರ್ ಶುಕ್ರವಾರ ಪಕ್ಷದ ಸಚಿವರಿಗೆ ವಿಶೇಷ ಉಪಹಾರ ಕೂಟ ಏರ್ಪಡಿಸಿ ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಪರೋಕ್ಷವಾಗಿ ಸಾಬೀತು ಪಡಿಸುವ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್ ನ 17 ಸಚಿವರಲ್ಲಿ 5 ಮಂದಿ ಹೊರತು ಪಡಿಸಿ ಉಳಿದವರೆಲ್ಲಾ ಹಾಜರಾಗಿದ್ದರು, ಡಿ,ಕೆ ಶಿವಕುಮಾರ್, ಶಿವಾನಂದ ಪಾಟೀಲ್ ಹಾಗೂ ವೆಂಕಟರಮಣಪ್ಪ ಮೊದಲು ಆಗಮಿಸಿದರು. ರಮೇಶ್ ಜಾರಕಿಹೊಳಿ, ಯು.ಟಿ ಖಾದರ್, ಆರ್ ವಿ ದೇಶಪಾಂಡೆ. ಶಿವಕುಮಾರ್ ರೆಡ್ಡಿ ಮತ್ತು ಜಯಮಾಲಾ ಗೈರಾಗಿದ್ದರು.
ಸಿಎಂ ಕುಮಾರ ಸ್ವಾಮಿ ಉಡುಪಿ ಪ್ರವಾಸದಲ್ಲಿರುವುದರಿಂದ ಉಸ್ತುವಾರಿ ಸಚಿವೆ ಜಯಮಾಲಾ ಹಾಜರಾಗಲಿಲ್ಲ, ಆರ್ ವಿ ದೇಶಪಾಂಡೆ ಮತ್ತು ಶಿವಶಂಕರ ರೆಡ್ಡಿ ವಿದೇಶಿ ಪ್ರಯಾಣದಲ್ಲಿದ್ದಾರೆ, ಇನ್ನು ಪಿಎಲ್ ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಬರಲಿಲ್ಲ, ಅನಾರೋಗ್ಯ ನೆಪ ಹೇಳಿ ಸಚಿವ ಯು,ಟಿ ಖಾದರ್ ಸ್ಕಿಪ್ ಆಗಿದ್ದರು.
ಸಿದ್ದರಾಮಯ್ಯ ಜೊತೆ ಯುರೋಪ್ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದ ಕೆ.ಜೆ ಜಾರ್ಜ್ ಕೊನೆ ಕ್ಷಣದಲ್ಲಿ ಪ್ರವಾಸ ಕೈ ಬಿಟ್ಟಿದ್ದರು. ಅವರು ಕೂಡ ಸಭೆಗೆ ಹಾಜರಾಗಿದ್ದರು. ಉಪಹಾರ ಕೂಟದಲ್ಲಿ ಕಾಂಗ್ರೆಸ್ ಸಚಿವರ ಜೊತೆಗೆ ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಭಾಗಿಯಾಗಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಇವರು ಹಾಜರಿಯಿಂದ ಕೂಟಕ್ಕೆ ರಾಜಕೀಯ ಆಯಾಮ ದೊರೆತಿದೆ.
ಸ್ಥಳೀಯ ಸಂಸ್ಥೆಯ ಚುನಾವಣೆಯ ನಂತರ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿರುವುದರಿಂದ ಆ ಬಗ್ಗೆ ಚರ್ಚಿಸಲು ಉಪಹಾರಕೂಟ ಏರ್ಪಡಿಸಿದ್ದೆ. ಅವಕಾಶ ಇರುವಲ್ಲಿ ಜೆಡಿಎಸ್ ಜೊತೆ ಸ್ಥಳೀಯ ಮಟ್ಟದಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ಲೋಕಸಭೆ ಚುನಾವಣೆ ಸಿದ್ದತೆ ಹಾಗೂ ಬರಗಾಲ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಸಿದ್ದಾಗಿ ಮಾಧ್ಯಮಗಳಿಗೆ ಜಿ ಪರಮೇಶ್ವರ್ ತಿಳಿಸಿದ್ದಾರೆ,
ಇನ್ನೂ ಇದರ ಬೆನ್ನಲ್ಲೇ ಶನಿವಾರ ಪಕ್ಷದ ಎಲ್ಲ ಶಾಸಕರಿಗೂ ಉಪಾಹಾರ ಕೂಟ ಏರ್ಪಡಿಸಿ ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಪರಮೇಶ್ವರ್ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos