ಬೆಂಗಳೂರು; ಸಮನ್ಯವ ಸಮಿತಿ ಸಂಬಂಧ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಹಗ್ಗಜಗ್ಗಾಟ ಮುಂದುವರೆಸಿದ್ದು, ನನ್ನ ಸೇರ್ಪಡೆಯಿಲ್ಲದೆ ಸಮನ್ವಯ ಸಮಿತಿ ಅಪೂರ್ಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್ ಅವರು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದು, ನನ್ನ ಸೇರ್ಪಡೆ ಇಲ್ಲದೆಯೇ ಸಮನ್ವಯ ಸಮಿತಿ ಅಪೂರ್ಣವಾಗುತ್ತದೆ. ನನ್ನ ಸೇರ್ಪಡೆಯಿಲ್ಲದೆಯೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಅನ(ಸಿಎಂಪಿ) ಅನುಷ್ಠಾನಗೊಳಿಸುವುದು ಕಷ್ಟ. ಸಮ್ಮಿಶ್ರ ಸರ್ಕಾರ ಒಪ್ಪಿಗೆ ನೀಡಿದ ಬಳಿಕವಷ್ಟೇ ಸಿಎಂಪಿ ಕುರಿತ ನೀಲನಕ್ಷೆ ಪೂರ್ಣಗೊಳ್ಳಲಿದೆ. ಸಮಿತಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರೇ ಇಲ್ಲದೆ ಸಿಎಂಪಿ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸಮನ್ವಯ ಸಮಿತಿಗೆ ವಿಶ್ವನಾಥ್ ಅವರನ್ನು ಸೇರ್ಪಡೆಗೊಳಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ನಡುವೆ ಜೆಡಿಎಸ್ ಕೂಡ ವಿಶ್ವನಾಥ್ ಸೇರ್ಪಡೆಗೊಳಿಸುವಂತೆ ಕಾಂಗ್ರೆಸ್ ಹೈ ಕಮಾಂಡ್ ಮೇಲೆ ಒತ್ತಡವನ್ನು ಹೇರುತ್ತಿದೆ.