ರಾಜಕೀಯ

ನನಗೆ ಮಂತ್ರಿಯಾಗೋಕೆ ಯೋಗ, ಭಾಗ್ಯಗಳಿಲ್ಲವೆ? - ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಶ್ನೆ

Raghavendra Adiga

ಮಂಗಳೂರು: ಜಾತಿಯ ಲೆಕ್ಕಚಾರದಲ್ಲಿ ಹಾಗೂ ಜಾತಿಯನ್ನೇ ಅರ್ಹತೆಯ ಮಾನದಂಡವಾಗಿರಿಸಿ ನನಗೆ ಮಂತ್ರಿ ಸ್ಥಾನ ನೀಡುವುದು ಬೇಡ.  ಒಂದು ವೇಳೆ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡುವುದಾದರೆ ನಾನು ಪಕ್ಷಕ್ಕೆ ದುಡಿದಿರುವುದನ್ನು ಪರಿಗಣಿಸಿ ಸ್ಥಾನಮಾನ ನೀಡಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದ್ದಾರೆ.

ನಗರದಲ್ಲಿ ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಯು.ಎನ್.ಐ ಕನ್ನಡ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಕೇವಲ ಜಾತಿಯನ್ನಷ್ಟೇ ಮಾನದಂಡವಾಗಿಟ್ಟುಕೊಂಡು ನನಗೆ ಮಂತ್ರಿ ಪದವಿ ಕೊಡುವುದು ಬೇಡ.  ನಾನು ಪಕ್ಷಕ್ಕಾಗಿ ದುಡಿದಿರುವುದನ್ನು ಹಾಗೂ ಜಾತಿ ಹೊರತುಪಡಿಸಿ ತಮಗೆ ಇರುವ ಅರ್ಹತೆಯನ್ನು ಪರಿಗಣಿಸಿ ಎಂದರು.  


ಸಾಮಾಜಿಕ ನ್ಯಾಯಕ್ಕಾಗಿ ದುಡಿದವನು ನಾನು,  ನನ್ನ ಈ ಅರ್ಹತೆಯನ್ನು ಪರಿಗಣಿಸಿದರೆ ಸಾಕು. ಉಳಿದ ವಿಚಾರಗಳು ತಮಗೆ ನಗಣ್ಯ. ಮೌಲ್ಯಮಾಪನ ಸಂದರ್ಭದಲ್ಲಿ ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸುವುದು ಸೂಕ್ತ ಎಂದು ಶ್ರೀನಿವಾಸ ಶೆಟ್ಟಿ ಮನವಿ ಮಾಡಿದರು.

ತಮಗೆ ಸಚಿವ ಸ್ಥಾನ ನೀಡಬೇಕೆಂದು ತಮ್ಮ ಪರವಾಗಿ ಬೆಂಗಳೂರಿನಲ್ಲಿ ಬಂಟ್ಸ್  ಸಂಘದ ಪ್ರಮುಖರು ಪ್ರತಿಭಟನೆ ಮಾಡಿರುವುದಕ್ಕೆ  ತಮ್ಮ ಸಹಮತವಿಲ್ಲ. ನಾನು ಎಲ್ಲಾ ಜಾತಿ, ಎಲ್ಲಾ ಧರ್ಮದವರ ಪ್ರತಿನಿಧಿ . ನಾನು ಯಾವತ್ತೂ ಜಾತಿ ಸಂಘಟನೆಯಲ್ಲಿ ತೊಡಗಿಸಿಕೊಂಡವನಲ್ಲ,  ಯಾವ ಸಂಘಟನೆಯವರು ನನ್ನ ಪರವಾಗಿ ಲಾಬಿ ಮಾಡಬೇಕೆಂದು ನಾನು ಬಯಸುವುದಿಲ್ಲ ಎಂದರು. 

ಪಕ್ಷಕ್ಕಾಗಿ ದುಡಿದಿದ್ದೇನೆ,  ಪಕ್ಷವನ್ನು ಸಂಘಟಿಸಿದ್ದೇನೆ,  ಪ್ರತಿ ಚುನಾವಣೆಯಲ್ಲಿಯೂ ನನ್ನ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚು ಮತಗಳು ದೊರೆಯುವಂತೆ ಶ್ರಮಿಸಿದ್ದೇನೆ. ಒಂದು ಅವಧಿಯಲ್ಲಿ ಪಕ್ಷೇತರ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲೂ ಬಿಜೆಪಿ ಸಂಘಟನೆಗಾಗಿ ದುಡಿದ್ದೇನೆ.  ಪಕ್ಷೇತರನಾಗಿದ್ದ ಅವಧಿಯಲ್ಲೂ ವಿಧಾನ ಪರಿಷತ್ ಸದಸ್ಯರ ಆಯ್ಕೆ, ರಾಜ್ಯಸಭಾ ಸದಸ್ಯರ ಆಯ್ಕೆಯ ಸಂದರ್ಭದಲ್ಲಿ  ಯಾವುದೇ ದುಡ್ಡು ಪಡೆಯದೆ  ಬಿಜೆಪಿ ಅಭ್ಯರ್ಥಿಗಳಿಗನೇ ಮತ ಹಾಕಿದ್ದೇನೆ ಎಂದರು. 

ಬೇರೆ ಪಕ್ಷಗಳಿಂದ ಪಕ್ಷ ಸೇರುವಂತೆ ಆಹ್ವಾನ ಬಂದಾಗ ಪಕ್ಷಾಂತರ ಮಾಡಿಲ್ಲ. ಆಮಿಷ ಬಂದಾಗ ದುಡ್ಡು ತೆಗೆದುಕೊಂಡಿಲ್ಲ. ನನ್ನ ಈ ಅರ್ಹತೆಗಳು ಮಂತ್ರಿ ಮಾಡಲು ಸಾಕಾಗುವುದಿಲ್ಲವೇ?. ನನಗೆ ಮಂತ್ರಿಯಾಗುವ ಯೋಗ, ಭಾಗ್ಯ ಇಲ್ಲವೆ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಶ್ನಿಸಿದ್ದಾರೆ.

SCROLL FOR NEXT