ರಾಜಕೀಯ

ರೋಷನ್ ಬೇಗ್ ಬಿಜೆಪಿ ರಾಜಕೀಯ ಭವಿಷ್ಯದ ಕನಸಿಗೆ ತಣ್ಣೀರು?

Srinivasamurthy VN

ಬೆಂಗಳೂರು: ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸರವಣ ಅವರನ್ನು ಗೆಲ್ಲಿಸಿಕೊಂಡು ಬರಲು ವಿಫಲರಾಗಿರುವು ದರಿಂದ ಬಿಜೆಪಿಯಲ್ಲಿ ರಾಜಕೀಯ ಭವಿಷ್ಯದ ಕನಸು ಕಂಡಿದ್ದ ಮಾಜಿ ಸಚಿವ ರೋಷನ್ ಬೇಗ್ ಆಸೆಗೆ ತಣ್ಣೀರೆರಚಿದಂತಾಗಿದೆ.

ಸೋಲಿನಿಂದಾಗಿ ಕಮಲ ಪಾಳಯದ ನೆರಳಿನಲ್ಲಿ ಭವಿಷ್ಯದ ಕಲ್ಪನೆ ಕತ್ತಲಾಗಲಿದೆ ಎಂಬ ಆತಂಕದಲ್ಲಿ ಬೇಗ್ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಗೊಂಡ ರೋಷನ್ ಬೇಗ್, ಬಿಜೆಪಿ ನಾಯಕರು ಬಯಸದಿದ್ದರೂ ಅತೃಪ್ತ ಶಾಸಕರೊಂದಿಗೆ ಏಕಾಏಕಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು.

ಬೇಗ್ ಅವರ ಈ ನಡೆ ಬೆನ್ನಲ್ಲೇ ನಡೆದ ಉಪ ಚುನಾವಣೆಯಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ನ ರಿಜ್ವಾನ್ ಅರ್ಷದ್ 49,887 ಮತಗಳನ್ನು ಪಡೆದು 13,521 ಮತಗಳ ಅಂತರದಿಂದ ಬಿಜೆಪಿಯ ಎಂ. ಸರವಣರನ್ನು ಸೋಲಿಸಿದರು. ಸರವಣ 36,367 ಮತಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಒಂದು ವೇಳೆ ಶಿವಾಜಿನಗರದಲ್ಲಿ ಸರವಣ ಗೆದ್ದಿದ್ದರೆ ಬೇಗ್ ಬಿಜೆಪಿ ಸೇರುವ ಹಾದಿ ಸುಗಮವಾಗುತ್ತಿತ್ತು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಈಗ ಅವರ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರೋಷನ್ ಬೇಗ್ ಪುತ್ರನಿಗೆ ಸ್ಥಾನ
ಬಿಜೆಪಿ ಮಾಜಿ ಸಚಿವ ರೋಷಬ್ ಬೇಗ್ ಬದಲು ಅವರ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡುವ ನಿರೀಕ್ಷೆ ಇದೆ. ಈ ಮೂಲಕ ರೋಷನ್ ಬೇಗ್‌ಗೆ ನೀಡಿದ ಮಾತು ಉಳಿಸಿಕೊಳ್ಳಲು ಸಿಎಂ ಬಿಎಸ್ ವೈ ಮುಂದಾಗಬಹುದು. ಅಲ್ಲದೆ ರೋಷನ್ ಬೇಗ್ ರಾಜ್ಯಸಭಾ ಸದಸ್ಯತ್ವದ ಮೇಲೆ ಕಣ್ಣಿಟ್ಟಿದ್ದು, ಇದಕ್ಕೆ ಬಿಜೆಪಿ ಬೆಂಬಲ ನೀಡಬಹುದು ಎನ್ನಲಾಗಿದೆ.

SCROLL FOR NEXT