ರಾಜಕೀಯ

ಬಿಜೆಪಿ ಸದಸ್ಯರ ಬಿಗಿಪಟ್ಟು: ವಿಧಾನಸಭೆ ಕಲಾಪ ನಾಳೆಗೆ ಮುಂದಕ್ಕೆ

Sumana Upadhyaya

ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನದ ಎರಡನೇ ದಿನವಾದ ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕೋಲಾಹಲ ಸೃಷ್ಟಿ ಮಾಡಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸರ್ಕಾರಕ್ಕೆ ಬಹುಮತವಿಲ್ಲ, ಧಿಕ್ಕಾರ ಧಿಕ್ಕಾರ; ಸಿ ಎಂ ಗೋ ಬ್ಯಾಕ್‍  ಎಂದು ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು.

 ಸ್ಪೀಕರ್ ರಮೇಶ್ ಕುಮಾರ್, ರಾಜ್ಯಪಾಲರ ಭಾಷಣಕ್ಕೆ ಗೌರವ ಸೂಚಿಸಬೇಕೆಂದು, ಸಕಾರಣವಿಲ್ಲದೇ ಪ್ರತಿಭಟನೆ ನಡೆಸುವುದು ತರವಲ್ಲ ಎಂದು ಖಾರವಾಗಿ ಹೇಳಿದರು. ಆದರೂ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿ ಮಾಡಿದ ಕಾರಣ ಸದನವನ್ನು ಕೆಲಕಾಲ ಮುಂದೂಡಲಾಯಿತು.

ನಂತರ ಸದನ ಸಮಾವೇಶಗೊಂಡಾಗಲೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ, ಬಿಜೆಪಿ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಧರಣಿ, ಗದ್ದಲ, ಘೋಷಣೆಗಳ ಕೂಗಾಟದಿಂದ ಸದನ ಗೊಂದಲದ ಗೂಡಾಯಿತು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆಯಿತು.

 ಕಾಂಗ್ರೆಸ್ ವಿರುದ್ಧ ಬಹಿರಂಗ ಬಂಡಾಯ ಸಾರಿರುವ ನಾಲ್ವರು ಕಾಂಗ್ರೆಸ್ ಶಾಸಕರಿಗೆ ಎಚ್ಚರಿಕೆಯ ಸಂದೇಶದ ನಡುವೆಯೂ ಇಂದಿನ ಕಲಾಪಕ್ಕೆ ಗೈರು ಹಾಜರಾಗಿ ವಿರೋಧಿ ಪಾಳಯಕ್ಕೆ ಹೊಸ ಅಸ್ತ್ರ ಕೊಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

SCROLL FOR NEXT