ರಾಜಕೀಯ

ಬಿಜೆಪಿಯ 'ಆಪರೇಷನ್ ಆಡಿಯೋ' ತನಿಖೆಗೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ

Shilpa D
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ "ಆಪರೇಷನ್‌ ಕಮಲ' ಆಡಿಯೋ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸ್ಪೀಕರ್ ರಮೇಶ್ ಕುಮಾರ್  ಸೂಚನೆ ನೀಡಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಸೂಚಿಸಿದ ಸ್ಪೀಕರ್ ರಮೇಶ್ ಕುಮಾರ್ ಇದನ್ನು ಸದನ ಸಮಿತಿಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ, ಎಫ್ ಐ ಆರ್ ಹಾಕಿ ತನಿಖೆ ನಡೆಸಬೇಕು, ಎಫ್ ಐಆರ್ ದಾಖಲಾದ ನಂತರ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ, ನ್ಯಾಯಾಂಗ ತನಿಖೆ ಸುದೀರ್ಘ ಸಮಯ ಹಿಡಿಯುತ್ತದೆ,  ನ್ಯಾಯಾಂಗ ತನಿಖೆಗೆ ನನಗೆ ಒಲವಿಲ್ಲ, ಹೀಗಾಗಿ ಏಜೆನ್ಸಿಗಳ ಮೂಲಕ ನಡೆಸಬೇಕು, ವಿಶೇಷ ತನಿಖಾ ತಂಡ ರಚಿಸಿ ಸರ್ಕಾರ ತನಿಖೆ ನಡೆಸಲಿ. ಯಾರಿಂದ ತನಿಖೆ ನಡೆಸಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ತಿಳಿಸಿದ್ದಾರೆ, 
ಆದರೆ ಎಸ್ ಐ ಟಿ ತನಿಖೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ, ರಾಜ್ಯ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ, ಹೀಗಾಗಿ ಮರು ಪರಿಶೀಲನೆ ನಡೆಸಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ, 
ಇನ್ನೂ ಇದಕ್ಕೂ ಮುನ್ನ ವಿಧಾನಸಭೆಯ ಕಲಾಪ ಪ್ರಾರಂಭಗೊಂಡ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸದನವನ್ನುದ್ದೇಶಿಸಿ ಮಾತನಾಡುತ್ತ ತಮ್ಮ ಮೇಲೆ ಕೇಳಿಬಂದಿರುವ ಹಣ ಪಡೆದುಕೊಂಡಿರುವ ಆರೋಪಗಳಿಂದ ತಾನು ಎರಡು ದಿನಗಳಿಂದ ತೀವ್ರ ಮಾನಸಿಕ ಗೊಂದಲಕ್ಕೆ ಒಳಗಾಗಿದ್ದೆ ಎಂದು ಹೇಳಿದರು. 
'ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಧ್ವನಿ ಮುದ್ರಿಕೆಯೊಂದನ್ನು ನನಗೆ ನೀಡಿದ್ದಾರೆ ಮತ್ತು ಅದರಲ್ಲಿ ನನಗೆ ದೊಡ್ಡ ಮೊತ್ತವೊಂದನ್ನು ಸಂದಾಯ ಮಾಡುವ ಕುರಿತು ಈ ಸದನದ ಗೌರವಾನ್ವಿತ ಸದಸ್ಯರೊಬ್ಬರ ಧ್ವನಿಯೆಂದು ಹೇಳಲಾಗುವ ವ್ಯಕ್ತಿಯು ಪ್ರಸ್ತಾಪ ಮಾಡಿರುವ ವಿಷಯ ನನ್ನ ಗಮನಕ್ಕೆ ಬಂದಿರುತ್ತದೆ, 
ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಪ್ರಾಮಾಣಿಕವಾಗಿಯೇ ಬದುಕಿದ್ದೇನೆ. ಮತ್ತು ಅಸಹಾಯಕರ ಪಾಲಿಗೆ ಸಮಾಧಾನ ವಹಿಸುವ ಕೆಲಸವನ್ನಷ್ಟೇ ನಾನು ಇದುವರೆಗೂ ಮಾಡುತ್ತಿದ್ದೇನೆ. ಮತ್ತು ಪಕ್ಷಾತೀತವಾಗಿ ಉತ್ತಮ ಸಂಸದೀಯಪಟುಗಳನ್ನು ಗುರುತಿಸುವ ಮತ್ತು ಗೌರವಿಸುವ ಕಾರ್ಯವನ್ನಷ್ಟೇ ಮಾಡುತ್ತಾ ಬಂದಿದ್ದೇನೆ ಎಂದು ಭಾವುಕರಾಗಿ ಹೇಳಿದ್ದಾರೆ.
SCROLL FOR NEXT