ರಾಜಕೀಯ

ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಖಡಕ್ ಎಚ್ಚರಿಕೆ: ಸಂಧಾನಕ್ಕೆ ಬೆಳಗಾವಿಗೆ ವೇಣುಗೋಪಾಲ್!

Shilpa D
ಬೆಳಗಾವಿ: ಸಂಪುಟ ಪುನಾರಚನೆ ವೇಳೆ ತಮ್ಮನ್ನು ಕೈಬಿಟ್ಟಿದ್ದಕ್ಕೆ ಕಳೆದ 2 ವಾರಗಳಿಂದ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಮತ್ತಷ್ಟು ಹಾನಿ ಉಂಟು ಮಾಡುವ ಮುನ್ನವೇ ಅದನ್ನು ತಡೆಯಲು ಕೆಪಿಸಿಸಿ ಮುಂದಾಗಿದೆ ಈ ನಿಟ್ಟಿನಲ್ಲಿ  ರಮೇಶ್ ಜಾರಕಿಹೊಳಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಏನೇ ಸಮಸ್ಯೆ, ಗೊಂದಲಗಳು ಇದ್ದರೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಳಿ ಚರ್ಚೆ ನಡೆಸಲಿ ಎಂದು ಕೆಪಿಸಿಸಿ ಖಡಕ್ ಸೂಚನೆ ನೀಡಿದೆ. ರಮೇಶ್ ಜಾರಕಿಹೊಳಿ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರ ಜೊತೆ ಯಾವ ಶಾಸಕರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡಿರುವ ಕೆಪಿಸಿಸಿ ಅಸಮಾಧಾನದ ವಿಚಾರದಲ್ಲಿ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದೆ. ರಮೇಶ್ ಜಾರಕಿಹೊಳಿ ಅವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದೆ.
ಗೊಂದಲಗಳಿದ್ದರೆ ನೇರವಾಗಿ ಹೈಕಮಾಂಡ್, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ಚರ್ಚೆ ನಡೆಸಲಿ. ಎಲ್ಲೆಲ್ಲೋ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ಪಕ್ಷ ಸ್ಪಷ್ಟವಾಗಿ ರಮೇಶ್ ಜಾರಕಿಹೊಳಿ ಅವರಿಗೆ ಸೂಚಿಸಿದೆ. ಜೊತೆಗೆ ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿರುವುದು ಕಾಂಗ್ರೆಸ್ ನಾಯಕರಿಗೆ ಸ್ಪಷ್ಟವಾಗಿದೆ.
ವೇಣುಗೋಪಾಲ್ ಜನವರಿ 8 ರಂದು ಬೆಳಗಾವಿಗೆ ಆಗಮಿಸಲಿದ್ದು, ಹಲವು ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಲಿದ್ದಾರೆ, 2 ದಿನ ಬೆಳಗಾವಿಯಲ್ಲಿ ತಂಗಲಿರುವ ವೇಣುಗೋಪಾಲ್, ರಮೇಶ್ ಜಾರಕಿಹೊಳಿ ಜೊತೆಗೂ ಚರ್ಚಿಸಲಿದ್ದಾರೆ. 
ಸಚಿವ ಸತೀಶ್ ಜಾರಕಿಹೊಳಿ ಅವರು ಗೋಕಾಕ್‌ಗೆ ಭೇಟಿ ನೀಡಿದ ಬಳಿಕ ರಮೇಶ್ ರಮೇಶ್ ಜಾರಕಿಹೊಳಿ ಅವರು ಪಕ್ಷದಲ್ಲಿ ಉಳಿಯುವುದಿಲ್ಲ ಎಂಬ ಸೂಚನೆ ನಾಯಕರಿಗೆ ಸಿಕ್ಕಿದೆ.  ಆದ್ದರಿಂದ ಪಕ್ಷ ಅವರ ವಿರುದ್ಧ ಕಠಿಣ ನಿಲುವನ್ನು ತಳೆದಿದೆ ಎಂದು ಮೂಲಗಳು ತಿಳಿಸಿವೆ.
SCROLL FOR NEXT