ಬೆಂಗಳೂರು: ಕೇವಲ 37 ಸ್ಥಾನಗಳನ್ನು ಗೆದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು ಕಾಂಗ್ರೆಸ್ ನ ದೊಡ್ಡತನ. ಇದನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಯರೆಡ್ಡಿ, ಸಿದ್ದರಾಮಯ್ಯ ಅವರೇ ನಮ್ಮ ನಾಯಕರು. ದೇವೇಗೌಡರ ನಂತರ ಅತ್ಯುತ್ತಮ, ಜನಪರ ಸಿಎಂ ಆಗಿದ್ದವರು ಸಿದ್ದರಾಮಯ್ಯ. 37 ಸ್ಥಾನ ಗೆದ್ದರೂ ಮುಖ್ಯಮಂತ್ರಿ ಸ್ಥಾನ ನೀಡಿದ್ದವರು. ಇದು ನಮ್ಮ ಕಾಂಗ್ರೆಸ್ ನಾಯಕರ ದೊಡ್ಡತನ. ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಗೆ ಗೌರವ ನೀಡುವ ಬದಲು ಸಿಎಂ ರಾಜೀನಾಮೆ ನೀಡುತ್ತೇನೆ ಎನ್ನುವುದು ಸರಿಯಲ್ಲ ಎಂದರು.
ಇದೇ ವೇಳೆ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು ಎಂದಿದ್ದ ಕಾಂಗ್ರೆಸ್ ಶಾಸಕ ಟಿ ಸೋಮಶೇಖರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಮಾಜಿ ಸಚಿವ, ಸೋಮಶೇಖರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಕಾಂಗ್ರೆಸ್ ಶಾಸಕರು ಮಾತಿಗೆ ಸಿಟ್ಟಿಗೆದ್ದ ಕುಮಾರಸ್ವಾಮಿ ನಾನು ಖುರ್ಚಿ ಬೆನ್ನಿಗೆ ಅಂಟಿಕೊಂಡಿಲ್ಲ. ಬೇಕಾದರೆ ರಾಜೀನಾಮೆ ನೀಡುತ್ತೇನೆ ಎಂದು ಪದೇ ಪದೇ ಹೇಳುವುದು ಸರಿಯಲ್ಲ. ಕೈ ಶಾಸಕರನ್ನು ನಿಯಂತ್ರಿಸಿ ಎನ್ನುವುದು ತಪ್ಪು ಎಂದರು.
ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಹೇಳಿಕೆ ಮೀತಿ ಮೀರುತ್ತಿದೆ. ಇದು ಒಂದು ರೇಖೆಯನ್ನು ದಾಟಿ ಮೈತ್ರಿಗೆ ಧಕ್ಕೆ ಆಗುವ ರೀತಿ ಹೇಳಿಕೆ ನೀಡುತ್ತಿದ್ದಾರೆ ಎನ್ನುತ್ತಾರೆ. ಆದರೆ, ಎಚ್ಡಿಕೆ ಹೇಳಿಕೆಯಿಂದಲೇ ಸರ್ಕಾರಕ್ಕೆ ಹಿಂಜರಿಕೆ ಆಗುತ್ತಿದೆ ಎಂದು ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡಿದರು.