ಬೆಂಗಳೂರು: ಕಾಂಗ್ರೆಸ್ ನ ಇಬ್ಬರು ಶಾಸಕರ ರಾಜೀನಾಮೆ ನಾಟಕ ಬಿಜೆಪಿ ನಾಯಕರು ಹೆಣೆದಿರುವ ಕುತಂತ್ರ. ರಾಜ್ಯದ ಜನತೆ ತೀರ್ಪು ನೀಡದಿರುವಾಗ ಹತಾಶೆಯಿಂದ ಹಿಂಬಾಗಿಲಿನಿಂದ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.
ನಿಮಗೆ 78 ಸೀಟು ಇರುವಾಗ ವಿಧಾನಸಭೆಯಲ್ಲಿ ಕೂರಲು ಈ ರಾಜ್ಯದ ಜನತೆ ತೀರ್ಪು ನೀಡಿದ್ದಾರೆ ಎಂದು ನೀವು ಹೇಳುತ್ತಿರುವುದೇ? ಕಳೆದ ಒಂದು-ಒಂದೂವರೆ ವರ್ಷದಿಂದ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಈ ರಾಜ್ಯದ ಜನತೆ ಸೂಕ್ಷ್ಮವಾಗಿ ನೋಡುತ್ತಿದ್ದಾರೆ.
ಅಧಿಕಾರ ಪಡೆಯುವ ಲಾಲಸೆಯಿಂದ ತಮ್ಮ ಆತ್ಮ ಗೌರವವನ್ನು ಬಿಟ್ಟು ಜೆಡಿಎಸ್ ಮುಂದೆ ಶರಣಾಗಿ ಕೈಮುಗಿದು ನಿಂತು ಹಿಂಬಾಗಿಲಿನಿಂದ ಹೋಗಿ ರಾಹುಲ್ ಗಾಂಧಿಯವರು ಅಧಿಕಾರ ಹೇಗೆ ಗಿಟ್ಟಿಸಿಕೊಂಡರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ನಿಮ್ಮ ಶಾಸಕರ ರಾಜೀನಾಮೆ ನಿಮ್ಮ ನಾಯಕತ್ವದ ಮೇಲೆ ಕೊಟ್ಟ ಏಟು ಎಂದು ಬಿಜೆಪಿ ಹೇಳಿದೆ.