ಚಿತ್ರದುರ್ಗ: ಮುಂದಿನ ತಿಂಗಳು ಆಗಸ್ಟ್ 10ರೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬಿಡದೇ ಹೋದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮೈತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ
ಹಿರಿಯೂರಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಆಗ್ರಹಿಸಿ ವಕೀಲರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ನಿನ್ನೆ ಭೇಟಿ ನೀಡಿ ವಕೀಲರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಾನು ಸಹ ರೈತನ ಮಗನಾಗಿದ್ದು, ರೈತರು ಕಷ್ಟ ತಮಗೂ ತಿಳಿದಿದೆ,
ರೈತರಿಗೆ ಕೊಟ್ಟ ಭರವಸೆಯ ಮಾತನ್ನು ಎಂದಿಗೂ ತಾವು ತಪ್ಪುವುದಿಲ್ಲ, ಮುಂದಿನ ತಿಂಗಳು 10ರೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಬೇಕು , ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವೆಂಕಟರಮಣಪ್ಪ ಹೇಳಿದ್ದಾರೆ
ಜುಲೈ 30ರ ಒಳಗಾಗಿ ಮಳೆ ಆಗಲಿದೆ ಎಂಬ ನಂಬಿಕೆ ಇದ್ದು, ನಂತರ ವಾಣಿ ವಿಲಾಸ ಸಾಗರಕ್ಕೆ ನೀರು ಬರುತ್ತದೆ, ಆಗಸ್ಟ್ 10ರೊಳಗೆ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಇದೇ ವೇಳೆ ಘೋಷಿಸಿದರು.
ಆ ಮೂಲಕ ಮೈತ್ರಿ ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ರಾಜೀನಾಮೆ ಅನಿವಾರ್ಯ ಎಂಬ ಸಂದೇಶ ರವಾನಿಸಿದ್ದಾರೆ
ಈ ಹಿಂದೆಯೂ ಸಹ ತಮಗೆ ನೀಡಿರುವ ಖಾತೆ ಬಗ್ಗೆ ಸಚಿವ ವೆಂಕಟರಮಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರ್ಮಿಕ ಖಾತೆಯನ್ನು ಇಟ್ಟುಕೊಂಡು ನಾನೇನು ಮಾಡಲಿ ? ತಮಗೂ ಪ್ರಭಾವಿ ಖಾತೆ ನೀಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕಾರ್ಮಿಕ ಖಾತೆಯಲ್ಲಿ ಇಟ್ಟುಕೊಂಡರೂ ಏನೂ ಕೆಲಸ ಆಗುವುದಿಲ್ಲ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ನನಗೆ ಬೇರೆ ಯಾವುದಾದರೂ ಪ್ರಭಾವಿ ಖಾತೆ ಕೊಡುವುದಾದರೆ ಕೊಡಲಿ. ಇಲ್ಲದಿದ್ದರೆ ನನ್ನ ದಾರಿ ನನಗೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೆ ಇವರ ಎಚ್ಚರಿಕೆಗೆ ಯಾರೂ ಸಹ ಸ್ಪಂದಿಸಲಿಲ್ಲ, ಸಚಿವರೂ ರಾಜೀನಾಮೆ ನೀಡಿರಲಿಲ್ಲ, ಈಗ ಮತ್ತೊಮ್ಮೆ ನೀರಿಗಾಗಿ ರಾಜೀನಾಮೆ ಬೆದರಿಕೆ ಹಾಕಿರುವುದು ಸರ್ಕಾರಕ್ಕೆ ತಲೆನೋವಾಗಿದೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos