ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅನಿಶ್ಚಿತತೆ ಮುಂದುವರೆದಿದ್ದು, ಬಹುಮತವಿಲ್ಲದಿರುವುದಕ್ಕೆ ಮೈತ್ರಿ ನಾಯಕರು ಸರ್ಕಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಸಿ. ಟಿ. ರವಿ ಲೇವಡಿ ಮಾಡಿದ್ದಾರೆ.
ರಮಡ ಹೊಟೇಲ್ ಮುಂಭಾಗ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಮೈತ್ರಿ ನಾಯಕರ ಬಳಿ ಮ್ಯಾಜಿಕ್ ನಂಬರ್ ಇದ್ದರೆ ಬುಧವಾರದವರೆಗೂ ಏಕೆ ಕಾಯಬೇಕು ಎಂದು ಪ್ರಶ್ನಿಸಿದರು. ಬಹುಮತವಿದ್ದವರು ತೋರಿಸಿಕೊಳ್ಳಲ್ಲ. ಅವರು ಹೇಳಿಕೊಳ್ಳುವುದನ್ನು ನೋಡಿದರೆ ಅವರ ಬಳಿ ಮ್ಯಾಜಿಕ್ ನಂಬರ್ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ದೋಸ್ತಿಗಳು ಏನೇ ಮಾಡಿದರೂ ಅದು ಬರೀ ಸರ್ಕಸ್ ಆಗುತ್ತೆ ಅಷ್ಟೇ ಅದು ಯಶಸ್ವಿಯಾಗುವುದಿಲ್ಲ ಎಂದು ಸಿಟಿ ರವಿ ಹೇಳಿದರು. ಎಂಟಿಬಿ ನಾಗರಾಜ್ ಹೇಳಿಕೆ ಗಮನಿಸಿದ್ದೇನೆ ಅವರು ಎಲ್ಲೂ ಕಾಂಗ್ರೆಸ್ ಜೊತೆ ಇರುತ್ತೇನೆಂದು ಹೇಳಿಲ್ಲ. ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಗೊತ್ತಿದೆ ಎಂದರು.
ಎಂಟಿಬಿ ನಾಗರಾಜ್ ಅವರನ್ನು ಕರೆತಂದಿದ್ದೆ ದೊಡ್ಡ ಸಾಧನೆ ಎಂದು ಭಾವಿಸಿದ್ದಾರೆ. ದೋಸ್ತಿಗಳು ಕೇವಲ ಗೊಂದಲ ಹಬ್ಬಿಸಲು ಶುರು ಮಾಡಿದ್ದರು. ಹಾಗಾಗಿ ಶಾಸಕರೆಲ್ಲ ಒಟ್ಟಿಗೆ ಇರಲಿಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ .